ಮಾಜಿ ಸಚಿವ ಎಲ್.ಜಿ ಹಾವನೂರು ಪುತ್ರ ಆತ್ಮಹತ್ಯೆ

ಬೆಂಗಳೂರು: ಮಾಜಿ ಕಾನೂನು ಸಚಿವ ಎಲ್.ಜಿ.ಹಾವನೂರು ಅವರ ಪುತ್ರ ಅಶೋಕ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹಾವನೂರು ಲೇಔಟ್ನಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ತುಮಕೂರು-ಬೆಂಗಳೂರು ಮುಖ್ಯರಸ್ತೆಯ ಹಾವನೂರು ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಅಶೋಕ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜ.21ರಂದು ಮಧ್ಯಾಹ್ನದವರೆಗೂ ಮನೆಯ ಕೊಠಡಿಯಿಂದ ಹೊರಗೆ ಬಾರದಿದ್ದಾಗ, ಅವರ ಪತ್ನಿ ಮತ್ತು ಮಕ್ಕಳು ಹೋಗಿ ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂದಿದೆ. ನಂತರ ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಯಾವುದೇ ಡೆತ್ ನೋಟ್ ಲಭಿಸಿಲ್ಲ ಎನ್ನಲಾಗಿದೆ.
ಈ ಸಂಬಂಧ ಬಾಗಲಗುಂಟೆ ಠಾಣೆಯ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳಿಂದ ಒಬ್ಬಂಟಿಯಾಗಿರುತ್ತಿದ್ದ ಅವರು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಮಮೂರ್ತಿನಗರದಲ್ಲಿ ಅಶೋಕ್ ಅವರು, ಹಾವನೂರು ಕಾನೂನು ಕಾಲೇಜು ನಡೆಸುತ್ತಿದ್ದರು. ಕಳೆದ 15 ದಿನಗಳಿಂದ ಮನೆಯಲ್ಲೇ ಇದ್ದರು ಮತ್ತು ಹೊರಗೆ ಎಲ್ಲಿಯೂ ಹೋಗುತ್ತಿರಲಿಲ್ಲ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







