ಕರ್ನಾಟಕದಲ್ಲಿ ಜನಿಸಿರುವ ಆಧಾರದ ಮೇಲೆ ಪಿಆರ್ಸಿ ನೀಡಲು ತೀರ್ಮಾನಿಸಿದ್ದೇವೆ : ಜಿ.ಪರಮೇಶ್ವರ್

ಬೆಂಗಳೂರು : ಹಿಂದೆಯೂ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅವರೇ ಕೊಡುತ್ತಿದ್ದರು. ಈಗ ಹೊಸದಾಗಿ ಏನಾದರೂ ಬದಲಾವಣೆ ಆಗಿದೆಯೇ? ಎಸ್ಐಆರ್ ಮಾಡುವಾಗ ಜಾತಿ ಪ್ರಮಾಣ ಪತ್ರವನ್ನು ಕೇಳಿದ್ದಾರೆ. ನಾವು ಯಾವ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಿದ್ದೇವೆ ಎಂಬುದರ ಬಗ್ಗೆ ಬಿಜೆಪಿಗರಿಗೆ ಅರಿವಿರಬೇಕು. ನಾವು ಸರಕಾರದಿಂದ ಅದನ್ನು ಅಧಿಕೃತವಾಗಿ ಕೊಡುತ್ತಿದ್ದೇವೆ. ಅದರಲ್ಲಿ ತಪ್ಪು ಇದೆ ಎಂದು ನನಗೆ ಅನಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜನಿಸಿರುವ ಆಧಾರದ ಮೇಲೆ ಪಿಆರ್ಸಿ ನೀಡಲು ತೀರ್ಮಾನಿಸಿದ್ದೇವೆ. ಹೆಚ್ಚಿನಾಂಶ ಎಲ್ಲರಿಗೂ 2002ರ ಮತದಾರರ ಪಟ್ಟಿಯ ಬಗ್ಗೆ ಕೇಳಿದ್ದಾರೆ. ಇದರಲ್ಲಿ ಎಲ್ಲರಿಗೆ ಶೇ. 50- 60ರಷ್ಟು ಇರುತ್ತದೆ. ಯಾರೋ ಒಬ್ಬರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಇರೋದಿಲ್ಲ. ಅಂತಹವರಿಗೆ ಪಿಆರ್ಸಿ ಅನುಕೂಲ ಆಗುತ್ತದೆ ಎಂದರು.
ಬರ ಪರಿಸ್ಥಿತಿ ಘೋಷಣೆಯಾದರೆ ರಾಜ್ಯದ ಜನರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಇನ್ನೂ ಏನು ನಿರ್ಧರಿಸಿಲ್ಲ. ರೈತರಿಗೆ, ಸಾಮಾನ್ಯ ಜನರಿಗೆ ಅನುಕೂಲ ಆಗಬೇಕು. ಯಾರೂ ಕೆಲಸ ಇಲ್ಲ ಅಂತ ಗುಳೆ ಹೋಗ್ತಾರೋ ಅವರಿಗೆ ಅನುಕೂಲ ಆಗಬೇಕು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಂಪುಟದಲ್ಲಿ ಹಿರಿಯರಿಗೆ ಸ್ಥಾನಮಾನ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನಮ್ಮ ನಾಯಕರು ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್ ಅನುಮತಿ ಕೊಟ್ಟರೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ನಾಯಕರು ಮಾನದಂಡಗಳ ಮೇಲೆ ಚರ್ಚಿಸುತ್ತಾರೆ ಎಂದು ಕೇಳಿದ್ದೇನೆ. ಅದರಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿದ್ಯ ಕೊಡಬೇಕು ಎನ್ನುವ ಅಂಶವಿದೆ, ಅದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು.
2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಬೇಕಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾನದಂಡಗಳ ಪ್ರಕಾರವೇ ತೀರ್ಮಾನ ಮಾಡುತ್ತಾರೆ. ಹಿಂದೆ ನಾನು ಅಧ್ಯಕ್ಷನಾಗಿದ್ದಾಗ ಹೊಸ ನಾಯಕತ್ವದ ಮೇಲೆ ಸಂಪುಟ ರಚಿಸಬೇಕು ಎಂದು ಮಾನದಂಡಗಳಿತ್ತು. ಅದು ಈಗಲೂ ಅನ್ವಯಿಸುತ್ತದೆ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದರು.






