ನಾಯಕತ್ವ ಬದಲಾವಣೆ ವಿಚಾರ | ಹೈಕಮಾಂಡ್ ಯಾವ ರೀತಿ ತೀರ್ಮಾನ ಕೈಗೊಂಡರೂ ನಾವು ಬದ್ಧ : ಜಿ.ಪರಮೇಶ್ವರ್

ಬೆಂಗಳೂರು : ನಾವು ಶಿಸ್ತಿನ ಸಿಪಾಯಿಗಳಾಗಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಯಾವ ರೀತಿ ತೀರ್ಮಾನ ಮಾಡುತ್ತಾರೆ ಅದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಯಾವ ರೀತಿ ತೀರ್ಮಾನ ಕೈಗೊಂಡರೂ ನಾವು ಬದ್ಧವಾಗಿದ್ದೇವೆ. ಏನೇ ಹೇಳಿದರೂ ನಾವು ಶಿಸ್ತಿನ ಸಿಪಾಯಿಗಳಂತೆ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.
ವೀಡಿಯೊ ಅಧರಿಸಿ ಪೊಲೀಸರಿಂದ ತನಿಖೆ :
ಎಂಡಿಎಂಎ ಡ್ರಗ್ಸ್ ಮತ್ತು ಕುದುರೆಗಳಿಗೆ ನೀಡುವ ಗ್ರೈಲಿನ್ ಎಂಬ ಚುಚ್ಚುಮದ್ದು ಬೆರೆಸಿ ಪಡೆಯುತ್ತಿರುವುದು ಬೇರೆಬೇರೆ ರಾಜ್ಯಗಳಲ್ಲಿ ಬೆಳಕಿಗೆ ಬಂದಿದೆ. ಅದೇರೀತಿಯ ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವುದು ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊ ಅಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದು, ಪತ್ತೆಹಚ್ಚಲಿದ್ದಾರೆ ಎಂದು ಅವರು ಹೇಳಿದರು.
ಒಳ ಮೀಸಲಾತಿಯನ್ನು ಮಾಡುವ ವಿಚಾರದಲ್ಲಿ ನಮ್ಮ ಸರಕಾರಕ್ಕೆ ಬದ್ಧತೆ ಇದೆ. ಈ ಬಗ್ಗೆ ಸರಕಾರ ಬದ್ಧವಾಗಿದ್ದು, ಇದರಲ್ಲಿ ಎರಡು ಮಾತಿಲ್ಲ. ನಾವು ಹಿಂದಕ್ಕೆ ಹೋಗುವ ಪ್ರಶ್ನೆಯೂ ಬರುವುದಿಲ್ಲ. ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ 101 ಸಮುದಾಯಗಳಿವೆ. ಯಾರಿಗೂ ಅನ್ಯಾಯವಾಗಬಾರದು. ಅದಕ್ಕಾಗಿ ಇಷ್ಟೊಂ ದು ಚರ್ಚೆಗಳಾಗುತ್ತಿದ್ದು, ಸರಿಪಡಿಸಿಕೊಳ್ಳುತ್ತೇವೆ ಎಂದು ಅವರು ಉಲ್ಲೇಖಿಸಿದರು.






