ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ʼಗ್ಯಾರಂಟಿʼಗೆ ಬಳಕೆ : ಎಚ್.ಎಂ.ರೇವಣ್ಣ
ಬೆಂಗಳೂರು : ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸಿದ್ದರಾಮಯ್ಯ ಸರಕಾರ ಸರಿಯಾಗಿ ಬಳಸಿಕೊಂಡಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲೂ ದಲಿತ ಫಲಾನುಭವಿಗಳಿದ್ದು, ಹೀಗಾಗಿ ಈ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಗುರುವಾರ ನಗರದ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ ಮೀಸಲಾದ ಹಣ ದುರುಪಯೋಗವಾದರೆ ಮಾತ್ರ ತಪ್ಪು ಆಗುತ್ತದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವ ನಿಧಿ ಹೀಗೆ ಎಲ್ಲಾ ಯೋಜನೆಗಳಲ್ಲೂ ಎಸ್ಸಿ-ಎಸ್ಟಿ ಸಮುದಾಯದ ಫಲಾನುಭವಿಗಳಿದ್ದಾರೆ. ಹೀಗಾಗಿ ಈ ಹಣ ಅವರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದರು.
ಎಸ್ಸಿ-ಎಸ್ಟಿ ಜನಸಂಖ್ಯೆಗೆ ತಕ್ಕಂತೆ ಅವರ ಅಭಿವೃದ್ಧಿಗಾಗಿ ದೇಶದಲ್ಲೇ ಮೊದಲು ಹಣವನ್ನು ಮೀಸಲು ಇಟ್ಟಿದ್ದ ರಾಜ್ಯ ಕರ್ನಾಟಕ. ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆ(ಎಸ್ಸಿಎಸ್ಪಿ-ಟಿಎಸ್ಪಿ) ಅನುಷ್ಠಾನ ಮಾಡಿದ್ದರು. ಆದರೆ, ಬಿಜೆಪಿಯವರು ಆ ಹಣವನ್ನು ಖರ್ಚು ಮಾಡದೇ ಹಾಗೇ ಉಳಿಸಿಕೊಂಡಿದ್ದರು. ಹೀಗಾಗಿ, ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಚ್.ಎಂ.ರೇವಣ್ಣ ತಿಳಿಸಿದರು.
ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗ ಸರಕಾರಕ್ಕೆ ನೀಡಿರುವ ನೋಟಿಸಿಗೆ ಸರಿಯಾದ ಉತ್ತರ ನೀಡಲಾಗುವುದು. ಅವರು ನೋಟಿಸ್ ಕೊಟ್ಟಿರುವುದು ಬೇರೆ ಕಾರಣಕ್ಕೆ. ನಾವು ಯಾವತ್ತೂ ಕೂಡ ಸುಪ್ರೀಂಕೋರ್ಟ್ ಆದೇಶ ಪಡೆದು ಉತ್ತರ ನೀಡಲ್ಲ. ಕೇಂದ್ರದಿಂದ ಬರುವ ಅನುದಾನಕ್ಕಾಗಿ ಬೇಡಿಕೊಳ್ಳುವ ಹಾಗಾಗಿದೆ. ಅಂತದರಲ್ಲಿ ಇದಕ್ಕೆ ಉತ್ತರ ಕೊಡಲು ಸಿದ್ದರಾಗಿದ್ದೇವೆ ಎಂದು ಎಚ್.ಎಂ.ರೇವಣ್ಣ ಹೇಳಿದರು.