ಬಿಡದಿ ಭೂಮಿ ಲೂಟಿ ಹೊಡೆಯಲು ಡಿ.ಕೆ.ಶಿವಕುಮಾರ್ ಸಂಚು : ಎಚ್.ಡಿ.ಕುಮಾರಸ್ವಾಮಿ

ಬೈರಮಂಗಲ : ಬಿಡದಿ ಹೋಬಳಿಯ ಫಲವತ್ತಾದ ಕೃಷಿ ಭೂಮಿ ಲೂಟಿ ಹೊಡೆಯಲು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತು ಸಂಚು ರೂಪಿಸಿದ್ದರು ಎಂದು ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಶನಿವಾರ ಬಿಡದಿಯ ಬೈರಮಂಗಲದಲ್ಲಿ ಬಿಡದಿ ಟೌನ್ಶಿಪ್ ಕುರಿತು ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದ ಸಭೆಗೆ ಮುಖ್ಯಮಂತ್ರಿ ಬಾರದ ಹಿನ್ನೆಲೆಯಲ್ಲಿ ಅವರು ರೈತರೊಂದಿಗೆ ಸಂವಾದ ನಡೆಸಿ, ಆರೋಪಗಳನ್ನು ಮಾಡಿದರು.
ಬಿಡದಿ ಸುತ್ತಮುತ್ತಲಿನ ಭೂಮಿಯನ್ನು ಕೊಳ್ಳೆ ಹೊಡೆಯುವ ಹಾಲಿ ಮುಖ್ಯಮಂತ್ರಿಯ ಸಂಚು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಅವರು ಈ ಭೂಮಿಯನ್ನು ಲೂಟಿ ಮಾಡುವ ಕನಸು ಹೊಂದಿದ್ದರು. ಅದಕ್ಕಾಗಿ ಜನತೆಗೆ ನೀವು ಬೆಂಗಳೂರಿನ ಜನ, ನಿಮ್ಮ ಭೂಮಿಗೆ ಚದರಡಿ ಬೆಲೆ ಬರುತ್ತದೆ, ಕೋಟ್ಯಂತರ ರೂಪಾಯಿ ಹಣವನ್ನು ಸಂಪಾದಿಸುತ್ತೀರಿ ಎಂದು ರೈತರ ಕಣ್ಣಿಗೆ ಮಂಕುಬೂದಿ ಎರಚಿದ್ದರು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಕನಕಪುರ ಭಾಗದ ರೈತರು ಯಾರೂ ನಿಮ್ಮ ಜಮೀನನ್ನು ಮಾರಾಟ ಮಾಡಬೇಡಿ. ಬೆಂಗಳೂರಿನವರು ಬಂದು ದುಪ್ಪಟ್ಟು ದುಡ್ಡು ಕೊಟ್ಟು ಕೇಳಿದರೂ ಜಮೀನು ಕೊಡಬೇಡಿ. ಮುಂದಿನ ದಿನಗಳಲ್ಲಿ ನಿಮ್ಮ ಜಮೀನಿಗೆ ಒಳ್ಳೆಯ ಬೆಲೆ ಬರುತ್ತದೆ, ನಾವೆಲ್ಲರೂ 'ಬೆಂಗಳೂರು ಜಿಲ್ಲೆ'ಯವರಾಗಲಿದ್ದೇವೆ' ಎಂದು ಶಿವಕುಮಾರ್ ಹೇಳಿದ್ದರು ಎಂದು ಅವರು ಸ್ಮರಿಸಿದರು.
ಈ ಹೇಳಿಕೆಯ ಮೂಲಕ ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಜಿಲ್ಲೆಯನ್ನಾಗಿ ಮರುನಾಮಕರಣ ಮಾಡುವ ಸುಳಿವನ್ನು ನೀಡಿದ್ದರು. ಡಿಕೆಶಿ ಅವರ ಈ ಮಾತುಗಳು ಆ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆ ಕ್ಷಣದಿಂದಲೇ ಈ ಭಾಗದ ಮೇಲೆ ರಿಯಲ್ ಎಸ್ಟೇಟ್ ಹುಳಗಳ ಕಾಕದೃಷ್ಟಿ ಬಿದ್ದಿತ್ತು ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಯ ಹೆಸರು ಮರು ನಾಮಕರಣ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಆ ನಂತರ ರಾಮನಗರ ಮತ್ತು ಹಾರೋಹಳ್ಳಿ ತಾಲೂಕುಗಳ ವ್ಯಾಪ್ತಿಯ 9 ಹಳ್ಳಿಗಳಲ್ಲಿ ಒಟ್ಟು ಸುಮಾರು 7,481 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮೊದಲ ಅಧಿಕೃತ ಪ್ರಾಥಮಿಕ ಸುತ್ತೋಲೆ ಹೊರಡಿಸಿದ್ದು ನೋಡಿದರೆ ಡಿಕೆಶಿ ಸಂಚು ಸ್ಪಷ್ಟವಾಗುತ್ತದೆ ಎಂದು ಕುಮಾರಸ್ವಾಮಿ ದೂರಿದರು.
ಇದು ರಾಮನಗರ ಜಿಲ್ಲೆ, ಬೆಂಗಳೂರು ದಕ್ಷಿಣ ಅಲ್ಲ: ಇದು ರಾಮನಗರ ಜಿಲ್ಲೆ. ಬೆಂಗಳೂರು ದಕ್ಷಿಣ ಎಂದು ನಾನು ಯಾವ ಕಾರಣಕ್ಕೂ ಹೇಳಲ್ಲ. ಕೆಲವರು ಈ ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕನಸಿನ ಕೂಸು ಎನ್ನುತ್ತಾರೆ. ಆದರೆ, ಅಂದು ನಾನು ಜಾರಿ ಮಾಡಲು ಉದ್ದೇಶಿಸಿದ್ದ ಯೋಜನೆಯನ್ನು ಕೈಬಿಟ್ಟು ವಿಧಾನಸಭೆಯ ಕಲಾಪದಲ್ಲಿಯೇ ಘೋಷಣೆ ಮಾಡಿದ್ದೆ. ಅಂದು ನಾನು ಬೇಡ ಎಂದು ಕೈಬಿಟ್ಟಿದ್ದ ಟೌನ್ ಶಿಪ್ ಯೋಜನೆಯನ್ನು ಕಾಂಗ್ರೆಸ್ ಸರಕಾರ, ಅದರಲ್ಲಿಯೂ ಹಾಲಿ ಮುಖ್ಯಮಂತ್ರಿ ಜಾರಿ ಮಾಡಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೆಡ್ ಜೋನ್ ಅಂತ ಇದೇ ಗ್ರಾಮದ ಇನ್ನೊಂದು ಭಾಗದಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇಲ್ಲಿ ರೆಡ್, ಗ್ರೀನ್, ಬ್ಲೂ, ಯಲ್ಲೋ ಎಂಬುದು ನನಗಿಂತ ಅವರ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ರೆಡ್ ಜೋನ್ ಎಂದು ಹೇಳುತ್ತಾ ಜನರ ತಲೆ ಕೆಡಿಸಿದ್ದಾರೆ. ಕುಮಾರಸ್ವಾಮಿ ರೆಡ್ ಜೋನ್ ಮಾಡಿದ್ದರಿಂದಲೇ ನನ್ನ ಹಳೆಯ ಸ್ನೇಹಿತ ಮಾತಾಡಿದ್ದಾರೆ. ಅವರು ಈ ಭಾಗದ ಹಾಲಿ ಶಾಸಕರು. ಅವರ ಬಗ್ಗೆ ಮಾತಾಡೋಕೆ ನನಗೆ ಅಸಹ್ಯ ಆಗುತ್ತದೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಎಂದು ಮುಖ್ಯಮಂತ್ರಿಗಳು ನನಗೆ ಪತ್ರ ಬರೆದರು. ನಿಮ್ಮನ್ನು ಬಿಟ್ಟು ನಾನೇನು ವಿಧಾನಸೌಧಕ್ಕೆ ಹೋಗಿ ಏನು ಚರ್ಚೆ ನಡೆಸಲಿ? ನಾನು ವಿಧಾನಸೌಧಕ್ಕೆ ಬರಲ್ಲ, ರೈತರ ಸನ್ನಿದಾನದಲ್ಲಿ ಚರ್ಚೆ ಆಗಬೇಕೆಂದು ಅವರಿಗೆ ಪತ್ರ ಬರೆದೆ ಎಂದು ಅವರು ಹೇಳಿದರು.
ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸ್ತೀನಿ ಅನ್ನುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಹುಟ್ಟಿ ಬರಬೇಕು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿ ತಿಹಾರ್ ಜೈಲಿಗೆ ಹೋಗಿದ್ರಾ?. ನಾನು ನಿಮ್ಮ ಜೊತೆ ಇದ್ದೇನೆ, ಯಾರು ಕೂಡ ಹೆದರಬೇಡಿ. ಕಾನೂನಿನ ಹೋರಾಟಕ್ಕೆ ನೀವು ಒಂದು ರೂಪಾಯಿ ಕೊಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರಾದ ಸುರೇಶ್ ಬಾಬು, ಎಚ್.ಟಿ.ಮಂಜುನಾಥ್, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಎ.ಮಂಜುನಾಥ್, ಡಾ.ಕೆ.ಅನ್ನದಾನಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಮನಗರ ಜಿಲ್ಲಾಧ್ಯಕ್ಷ ಜಯಮುತ್ತು ಸೇರಿದಂತೆ ಅನೇಕ ಮುಖಂಡರು, ರೈತರು ಉಪಸ್ಥಿತರಿದ್ದರು.






