‘ನೈಸ್’ ಹಗರಣದ ವಿರುದ್ಧ ಜನರು ಎದ್ದು ನಿಲ್ಲಬೇಕು : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ನೈಸ್ ಕಂಪೆನಿಯ ವಿರುದ್ಧ ನಾನು ಜೆಡಿಎಸ್ ಕಾರ್ಯಕರ್ತರನ್ನು ಎತ್ತಿಕಟ್ಟುತ್ತಿಲ್ಲ, ಇಡೀ ರಾಜ್ಯದ ಜನರೇ ಈ ಯೋಜನೆ ವಿರುದ್ಧ ಎದ್ದು ನಿಲ್ಲಬೇಕಾಗಿದೆ. ಅಂತಹ ದೊಡ್ಡ ಹಗರಣ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನ ನಮ್ಮನ್ನು ಆಯ್ಕೆ ಮಾಡಿರುವುದು ಈ ದುರಾಡಳಿತವನ್ನು ಪ್ರಶ್ನೆ ಮಾಡಲು. ರೈತರ ಭೂಮಿಯನ್ನು ಲಪಟಾಯಿಸುವ ಕೆಲಸ ನಡೆದರೆ ಅದರ ಬಗ್ಗೆ ದನಿ ಎತ್ತಲು ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ. ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ಹಣವನ್ನು ಕೊಟ್ಟಿಲ್ಲ ಎಂದು ದೂರಿದರು.
ಟೇಪ್ ಹಿಡಿದುಕೊಂಡು ಅಳತೆ ಮಾಡಿ ಭೂಮಿ ಲಪಟಾಯಿಸಿ ದೋಖಾ ಮಾಡಿ, ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು 20ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹಿಸುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹಗರಣ. ಆ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲ, ರಾಜ್ಯ ಸರಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇ ಅಕ್ರಮ. ಕೂಡಲೇ ಟೋಲ್ ಸಂಗ್ರಹಕ್ಕೆ ಸರಕಾರ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
ಇಲ್ಲಿಯ ಶಾಸಕ ಹಿಂದೆ ನನ್ನ ಜೊತೆಯಲ್ಲೇ ಇದ್ದ. ಆ ಸಮಯದಲ್ಲಿ ಗುತ್ತಿಗೆದಾರರೊಬ್ಬರು 600ಕೋಟಿ ರೂ.ಕೆಲಸ ಮಾಡಿ ಹಣ ಸಿಗದೇ ಇದ್ದಾಗ, ಅಯ್ಯಯ್ಯೋ ಅಣ್ಣ.. ಆ ವಿಷಯ ಎತ್ತಬೇಡಣ್ಣ ಎಂದು ಕಾಲು ಹಿಡಿದುಕೊಳ್ಳಲು ಬಂದಿದ್ದ. ಅದನ್ನು ಅವರು ನೆನಪಿಸಿಕೊಳ್ಳಬೇಕು. ಇವನಿಂದ ನಾನು ಕಲಿಯಬೇಕಾ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
‘ಕುಮಾರಸ್ವಾಮಿ ಪಾಪದ ಕೊಳೆಯನ್ನು ನಾವು ತೊಳೆಯುತ್ತಿದ್ದೇವೆ’ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ಕೊಳೆ ನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ದೀಪದ ಕಂಬ ಇರಲಿಲ್ಲ. ದೇವೇಗೌಡರು ಕನಕಪುರಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವಾಗ ಇವರು ಎಲ್ಲಿದ್ದರು? ಕೊತವಾಲನಿಗೆ ಹೆಂಡ ಕೊಡಲು ಬಾರ್ನಲ್ಲಿ ಕೂತಿದ್ದರು ಎಂದು ಟೀಕಿಸಿದರು.






