ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟ ಪ್ರಕರಣ; ಪೋಷಕರಿಗೆ 10.52 ಲಕ್ಷ ಪರಿಹಾರ ನೀಡಲು ಹೆಸ್ಕಾಂಗೆ ಹೈಕೋರ್ಟ್ ಆದೇಶ

ಬೆಂಗಳೂರು : ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಲುಕಿದ್ದ ಗಾಳಿಪಟ ತೆಗೆಯಲು ಹೋಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟ 11 ವರ್ಷದ ಬಾಲಕನ ಪೋಷಕರಿಗೆ 10.52 ಲಕ್ಷ ರೂ. ಪರಿಹಾರ ನೀಡುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಹೈಕೋರ್ಟ್ ಆದೇಶಿಸಿದೆ.
ಬಾಲಕನ ನಿರ್ಲಕ್ಷ್ಯವೇ ಆತನ ಸಾವಿಗೆ ಕಾರಣವೆಂದು ಪರಿಗಣಿಸಿ ಪರಿಹಾರದ ಅರ್ಜಿ ತಿರಸ್ಕರಿಸಿದ್ದ ಬೆಳಗಾವಿ ಲೋಕ ಅದಾಲತ್ನ 2015ರ ಆದೇಶ ಪ್ರಶ್ನಿಸಿ ಮೃತ ಬಾಲಕನ ತಂದೆ ಗುಡದಪ್ಪ ರುದ್ರಪ್ಪ ತಳವಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಲೋಕ ಅದಾಲತ್ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯ, ಬಾಲಕ ತಾನಾಗಿಯೇ ವಿದ್ಯುತ್ ಕಂಬ ಹತ್ತಿದ್ದ ಎಂಬ ಕಾರಣ ನೀಡಿ ವಿದ್ಯುತ್ ಸರಬರಾಜು ಕಂಪನಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ವಸತಿ ಪ್ರದೇಶಗಳು ಮತ್ತು ಖಾಸಗಿ ಜಮೀನುಗಳ ಮೂಲಕ ಹೈಟೆನ್ಷನ್ ವಿದ್ಯುತ್ ಮಾರ್ಗಗಳು ಹಾದುಹೋಗುತ್ತವೆ ಎಂಬುದು ಅಧಿಕಾರಿಗಳಿಗೆ ತಿಳಿದಿರುತ್ತದೆ. ಮಕ್ಕಳು ಕಂಬ ಅಥವಾ ಮರಗಳಿಗೆ ಸಿಲುಕಿದ ಗಾಳಿಪಟಗಳನ್ನು ತರಲು ಪ್ರಯತ್ನಿಸುವುದು ನಿರೀಕ್ಷಿಸಲಾಗದ ಸಂಗತಿಯಲ್ಲ. ಬೇಲಿ, ಕಂಬ ಹತ್ತುವುದನ್ನು ತಡೆಯುವ ಸಾಧನ, ಸುರಕ್ಷತಾ ಕವಚ ಹಾಗೂ ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸುವುದು ವಿದ್ಯುತ್ ಪ್ರಾಧಿಕಾರಗಳ ಕರ್ತವ್ಯ. ಆದ್ದರಿಂದ, 'ಕಟ್ಟುನಿಟ್ಟಿನ ಹೊಣೆಗಾರಿಕೆ' ತತ್ವದಡಿ ಬಾಲಕನ ಸಾವಿಗೆ ಹೆಸ್ಕಾಂ ಸಂಸ್ಥೆಯೇ ಪರಿಹಾರ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಸಾರ್ವಜನಿಕರ ಸುರಕ್ಷತೆಗೆ ಮುನ್ನೆಚ್ಚರಿಕೆ ಅಗತ್ಯ:
ಹನ್ನೊಂದು ವರ್ಷದ ಬಾಲಕನ ವರ್ತನೆಯನ್ನು ವಿವೇಚನಾಯುಕ್ತ ವಯಸ್ಕನ ವರ್ತನೆಗೆ ಹೋಲಿಸಿ, ಸಹಭಾಗಿ ನಿರ್ಲಕ್ಷ್ಯವನ್ನು ಆರೋಪಿಸಲಾಗದು. ಮಕ್ಕಳು ಸ್ವಾಭಾವಿಕವಾಗಿಯೇ ಕುತೂಹಲ ಹೊಂದಿರುತ್ತಾರೆ. ಗಾಳಿಪಟ, ಮರಗಳು ಹಾಗೂ ವಿದ್ಯುತ್ ಕಂಬಗಳಂತಹ ವಸ್ತುಗಳ ಕಡೆಗೆ ಆಕರ್ಷಿತರಾಗುವುದು ಸಹಜ ಬಾಲ್ಯದ ವರ್ತನೆಯಾಗಿದೆ. ಬಾಲಕ ಆಕಸ್ಮಿಕವಾಗಿ ಕಂಬವನ್ನು ಸ್ಪರ್ಶಿಸಿದ್ದನೇ ಅಥವಾ ಕಂಬ ಹತ್ತಿದ್ದನೇ ಎಂಬುದು ಪರಿಹಾರ ನಿರ್ಧರಿಸುವಾಗ ಮುಖ್ಯವಾಗುವುದಿಲ್ಲ. ವಿದ್ಯುತ್ ಕಂಪನಿಯ ನಿರ್ವಹಣೆಯಲ್ಲಿದ್ದ ಹೈವೋಲ್ಟೇಜ್ ವಿದ್ಯುತ್ ವ್ಯವಸ್ಥೆ ಸ್ಪರ್ಶಿಸಿದ್ದರಿಂದಲೇ ಬಾಲಕ ಮೃತಪಟ್ಟಿದ್ದಾನೆಂಬುದು ನಿರ್ವಿವಾದ ಸಂಗತಿ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಘಟನೆಯ ಬಳಿಕ ಸಿದ್ಧಪಡಿಸಿದ್ದ ಸ್ಥಳ ಪರಿಶೀಲನಾ ವರದಿಯಲ್ಲಿ ಬಾಲಕನ ಕೂದಲು ಮತ್ತು ಚರ್ಮದ ಭಾಗಗಳು ವಿದ್ಯುತ್ ಕಂಬಕ್ಕೆ ಅಂಟಿಕೊಂಡಿದ್ದವು ಎಂಬುದು ದಾಖಲಾಗಿದೆ. ಇದರಿಂದ, ಬಾಲಕ ಜೀವಂತ ವಿದ್ಯುತ್ ವ್ಯವಸ್ಥೆಯ ಸಂಪರ್ಕಕ್ಕೆ ಬಂದಿದ್ದ ಎಂಬುದು ದೃಢಪಟ್ಟಿದೆ. ವಿದ್ಯುತ್ ಕಣ್ಣಿಗೆ ಕಾಣದ, ಸದ್ದಿಲ್ಲದ ಮತ್ತು ಮಾರಣಾಂತಿಕ ಸ್ವರೂಪದ ಅಪಾಯಕಾರಿ ಶಕ್ತಿಯಾಗಿದೆ. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯುತ್ ವ್ಯವಸ್ಥೆ ಹೇಗೆ ಸ್ಥಾಪಿಸಬೇಕು, ನಿರ್ವಹಿಸಬೇಕು ಮತ್ತು ಸುರಕ್ಷಿತಗೊಳಿಸಬೇಕು ಎಂಬುದರ ಮೇಲೆ ಸಾರ್ವಜನಿಕರಿಗೆ ವಿಶೇಷವಾಗಿ ಮಕ್ಕಳಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.






