ಮುಂಭಡ್ತಿ ಬ್ಯಾಕ್ಲಾಗ್ ಹುದ್ದೆಗಳಲ್ಲಿ ಅನ್ಯಾಯ; ನ.28ರ ಆದೇಶ ಹಿಂಪಡೆಯಲು ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಆಗ್ರಹ

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ಮುಂಭಡ್ತಿಯಲ್ಲಿನ ಬ್ಯಾಕ್ಲಾಗ್ ಹುದ್ದೆಗಳಲ್ಲಿ 12 ಬಿಂದುಗಳ ಕೊರತೆ ತೋರಿಸಿ ಅನ್ಯಾಯವೆಸಗಿರುವ 2023ರ ನವೆಂಬರ್ 28ರ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ, ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಶುಕ್ರವಾರ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ದಲಿತರ ಪರ ಕಾಳಜಿ ಇದ್ದು, ಕೂಡಲೇ ಸರಕಾರ ಈ ತಪ್ಪನ್ನು ಸರಿಪಡಿಸಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಮಾಡಲು ಬಿಂದುಗಳನ್ನು ಗುರುತಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನ.28ಕ್ಕೆ ಆದೇಶ ಹೊರಡಿಸಿದೆ.
ಎಸ್ಸಿ-ಎಸ್ಟಿ ಮುಂಭಡ್ತಿ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಸರಕಾರ ಈ ಹಿಂದೆ ಎರಡೂ ಆದೇಶ ಹೊರಡಿಸಿದ್ದು, ಆದೇಶದಲ್ಲಿ 33 ಬಿಂದುಗಳ ಒಂದು ರೋಸ್ಟರ್ ವರ್ತುಲದಲ್ಲಿ ಪರಿಶಿಷ್ಟ ಜಾತಿಗೆ ಹಾಲಿ ನಿಗದಿಪಡಿಸಿದ್ದ ಬಿಂದುಗಳ ಜೊತೆಗೆ 9 ಗರಿಷ್ಠ ಹೆಚ್ಚುವರಿ ಬಿಂದುಗಳನ್ನು ಹಾಗೂ ಪರಿಶಿಷ್ಟ ಪಂಗಡಕ್ಕೆ ಗರಿಷ್ಟ 1 ಹೆಚ್ಚುವರಿ ಬಿಂದುವನ್ನು ರೂಪಿಸಲಾಗಿತ್ತು. ಆದರೆ, ಇದೀಗ ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಶೇ.15ರಿಂದ ಶೇ.17ಕ್ಕೆ ಮತ್ತು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾದ ಹಿನ್ನೆಲೆಯಲ್ಲಿ ಪರಿಶಿಷ್ಟ ನೌಕರರಿಗೆ ಮುಂಭಡ್ತಿಯಲ್ಲಿ 100 ಬಿಂದುಗಳ ಪರಿಷ್ಕೃ ತ ರೋಸ್ಟರ್ ನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನೌಕರರಿಗೆ ‘ಡಿ’ ಮತ್ತು ‘ಸಿ’ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಆದೇಶವನ್ನೂ ಪರಿಶಿಷ್ಟರಿಗೆ ಹೊರಡಿಸಲಾದ ರೋಸ್ಟರ್ ಬಿಂದುಗಳ ಜೊತೆಯಲ್ಲಿಯೇ ಸೇರಿಸಿ ಒಂದೇ ಆದೇಶ ಹೊರಡಿಸುವ ಮೂಲಕ ಆಡಳಿತ ಸುಧಾರಣೆ ಇಲಾಖೆ ಈ ವರ್ಗದ ನೌಕರರಿಗೆ ದ್ರೋಹ ಬಗೆದಿದೆ. ರೀತಿಯ ತಪ್ಪುಗಳನ್ನು ಮಾಡುವ ಅಧಿಕಾರಿಗಳನ್ನು ಗುರುತಿಸಿ ಇಲಾಖೆ ವಿಚಾರಣೆ ನಡೆಸಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಅವರನ್ನು ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







