ಆರೆಸ್ಸೆಸ್ ವಿರುದ್ಧ ಹೋರಾಟ ಕೈಬಿಡಬಾರದೆಂದು ದೊರೆಸ್ವಾಮಿ ಕೂಗಾಗಿತ್ತು : ಜಿಗ್ನೇಶ್ ಮೇವಾನಿ

ಬೆಂಗಳೂರು : ಆರೆಸ್ಸೆಸ್ ವಿರುದ್ಧ ಹೋರಾಟ ಎಂದಿಗೂ ಕೈಬಿಡಬಾರದೆಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ ಅವರ ಕೂಗಾಗಿತ್ತು ಎಂದು ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಾ.ಎಚ್.ಎಸ್.ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ, ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ, ಗೌರಿ ಮೀಡಿಯಾ ಟ್ರಸ್ಟ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ’ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ದೊರೆಸ್ವಾಮಿ ಅವರನ್ನು ಭೇಟಿ ಮಾಡಿದಾಗೆಲ್ಲ, ಅವರು, ಭೂಮಿಗಾಗಿ ಹೋರಾಟ ನಿಲ್ಲಿಸಬೇಡ. ಆರೆಸ್ಸೆಸ್ ವಿರುದ್ಧದ ಹೋರಾಟ ಕೈಬಿಡಬೇಡ ಎನ್ನುತ್ತಿದ್ದರು. ಅವರ ಈ ಮಾತುಗಳು ನನ್ನ ಎದೆಯಲ್ಲಿ ಹಾಗೆಯೇ ಉಳಿದಿವೆ. ದೊರೆಸ್ವಾಮಿ ಅವರ ಕನಸಿನ ಸಾಕಾರಕ್ಕಾಗಿ, ಭೂಮಿ ವಸತಿ ಹಕ್ಕಿಗಾಗಿ ಜನಶಕ್ತಿ, ಎದ್ದೇಳು ಕರ್ನಾಟಕ ಮುಂತಾದ ಸಂಘಟನೆಗಳು ಬಹಳ ಮಹತ್ವದ ಕೆಲಸ ಮಾಡುತ್ತಿವೆ. ಊನಾ ಚಳವಳಿಯಿಂದ ಸ್ಫೂರ್ತಿ ಪಡೆದು ಇಲ್ಲಿ ಉಡುಪಿ ಚಲೋ ನಡೆದಿತ್ತು. ಅದಕ್ಕೆ ನನಗೆ ಆಹ್ವಾನಿಸಲಾಗಿತ್ತು. ಈಗ ಇಂತಹ ಹೋರಾಟಕ್ಕೆ 10 ವರ್ಷಗಳಾಗಿದ್ದು, ಮುಂದೆ ನಾವು ಮುಂದುವರಿಸೋಣ ಎಂದು ಅವರು ಕರೆ ನೀಡಿದರು.
ದೊರೆಸ್ವಾಮಿ ಅವರ ಹೋರಾಟ, ಆಲೋಚನೆಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರಿಗೆ ನಾವು ‘ದೊರೆಸ್ವಾಮಿ ಪ್ರಶಸ್ತಿ’ ನೀಡಬೇಕು. ಈ ಸಂಬಂಧ ಚರ್ಚೆ ನಡೆಸಬೇಕಾಗಿದೆ.
-ಜಿಗ್ನೇಶ್ ಮೇವಾನಿ, ಗುಜರಾತ್ನ ಕಾಂಗ್ರೆಸ್ ಶಾಸಕ






