ಒಳಮೀಸಲಾತಿ ಸಮೀಕ್ಷೆ ಸಮಸ್ಯೆ ಸರಿಪಡಿಸಿ : ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮಾದಿಗ-ಛಲವಾದಿ ಮುಖಂಡರ ನಿಯೋಗ ಮನವಿ

ಬೆಂಗಳೂರು : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗೂ ನ್ಯಾಯ ಕಲ್ಪಿಸಲು ಸಮೀಕ್ಷೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ಆದರೆ, ಗಣತಿ ವೇಳೆ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದು, ಇವುಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಮಾದಿಗ-ಛಲವಾದಿ ಮುಖಂಡರ ನಿಯೋಗವು, ಒಳಮೀಸಲಾತಿ ಆಯೋಗಕ್ಕೆ ಒತ್ತಾಯಿಸಿದೆ.
ಶುಕ್ರವಾರ ಬೆಂಗಳೂರಿನಲ್ಲಿ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿದ ಮಾದಿಗ-ಛಲವಾದಿ ಮುಖಂಡರ ನಿಯೋಗವು, ಜಾತಿ ಸಮೀಕ್ಷೆ ವೇಳೆ ಎದುರಾಗಿರುವ ಸಮಸ್ಯೆಗಳನ್ನು ಬಿಕ್ಕಟ್ಟುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಕೋರಿದರು.
ಒಳಮೀಸಲಾತಿ ಶೀಘ್ರ ಜಾರಿಗೊಳಿಸಬೇಕೆಂಬ ಸರಕಾರದ ಕಾಳಜಿ, ಬದ್ಧತೆ ಸರಿಯಿದೆ. ಆದರೆ, ಜಾತಿಸಮೀಕ್ಷೆ ಕಾರ್ಯಕ್ಕೆ ಗಣತಿದಾರರಿಗೆ ಕೇವಲ 3 ಗಂಟೆ ತರಬೇತಿ ನೀಡಿರುವುದು ಬಹಳಷ್ಟು ಲೋಪಗಳಿಗೆ ಕಾರಣವಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ಮಟ್ಟಿಗೆ ಸಮಗ್ರ ಮಾಹಿತಿ ನೀಡುವ ತರಬೇತಿ ಆಯೋಜಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ನೆಟ್ವರ್ಕ್, ಸರ್ವರ್ ಸಮಸ್ಯೆ ಪರಿಹರಿಸಲು ಪ್ರತಿ ಹೋಬಳಿಗೊಬ್ಬರಂತೆ ತಾಂತ್ರಿಕ ಸಲಹೆಗಾರನನ್ನು ನೇಮಿಸಬೇಕು. ಪರಿಶಿಷ್ಟ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ತಡವರಿಸುತ್ತಿದ್ದಾರೆ. ಆದ್ದರಿಂದ ಪ್ರಶ್ನೆಗಳನ್ನು ಸರಳಗೊಳಿಸಬೇಕು ಎಂದು ನಿಯೋಗ ತಿಳಿಸಿದೆ.
ಪಡಿತರ ಚೀಟಿಯಲ್ಲಿ ಹೊಸದಾಗಿ ಮದುವೆ ಆಗಿಬಂದ ಸೊಸೆ, ಆಗತಾನೇ ಹುಟ್ಟಿದ ಮಕ್ಕಳ ಮಾಹಿತಿ ದಾಖಲಿಸಿಕೊಳ್ಳಲು ಯಾವುದೇ ದಾಖಲೆ ಕೇಳಬಾರದು. ಈ ನಿಟ್ಟಿನಲ್ಲಿ ಆದೇಶಿಸಬೇಕು. ಬಹಳಷ್ಟು ಗಣತಿದಾರರ ಬಳಿ ಗುಣಮಟ್ಟದ ಮೊಬೈಲ್ಗಳು ಇಲ್ಲದ ಕಾರಣ ಜಾತಿಗಣತಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಲು ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.
ಜಾತಿಗಣತಿ ಕಾರ್ಯ ಪಾರದರ್ಶಕ, ನ್ಯಾಯಸಮ್ಮತವಾಗಿರಬೇಕು. ಆದರೆ, ಕೆಲವೆಡೆ ಗೊತ್ತಿದ್ದು ತಪ್ಪು ಮಾಹಿತಿ ನೋಂದಾಯಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದ್ದರಿಂದ ತಪ್ಪು ಮಾಹಿತಿ ನೋಂದಾಯಿಸಿಕೊಳ್ಳುವ ಗಣತಿದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ನಿಯೋಗ ತಿಳಿಸಿದೆ.
ಗಣತಿ ಕಾರ್ಯದಲ್ಲಿ ಶಿಕ್ಷಕರು ಹಾಗೂ ಇತರೆ ಎಲ್ಲ ಸಿಬ್ಬಂದಿಗೆ ಅಗತ್ಯ ಪರಿಕರಗಳನ್ನು ನೀಡಬೇಕು. ಬಿಸಿಲು ಹೆಚ್ಚಿರುವ ಕಾರಣಕ್ಕೆ ಅವರಿಗೆ ಟೋಪಿ ಸೇರಿ ಎಲ್ಲ ಅಗತ್ಯ ಸಾಮಾಗ್ರಿಗಳನ್ನು ತುರ್ತಾಗಿ ಓದಗಿಸಬೇಕು. ಜೊತೆಗೆ ಅವರಿಗೆ ಈ ಕಾರ್ಯ ಕೈಗೊಂಡ ಕಾರಣಕ್ಕೆ ನೀಡುವ ಗೌರವಧನವನ್ನು ವಿಳಂಬ ಮಾಡದೆ ಬಿಡುಗಡೆಗೊಳಿಸಬೇಕು ಎಂದು ಮಾದಿಗ-ಛಲವಾದಿ ಮುಖಂಡರ ನಿಯೋಗ ತಿಳಿಸಿದೆ.
ಈ ಆಯೋಗದ ಮನವಿಗಳನ್ನು ಆಲಿಸಿದ ನ್ಯಾ.ನಾಗಮೋಹನ್ ದಾಸ್ ಅವರು, ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಕೆಪಿಎಸ್ಸಿ ಮಾಜಿ ಸದಸ್ಯ ದಾಸಯ್ಯ, ಮುತ್ತುರಾಜ್, ಅಮರನಾಥ ಮಳವಳ್ಳಿ ಇತರರು ನಿಯೋಗದಲ್ಲಿದ್ದರು.
ಬೇಡಜಂಗಮ, ಬುಡ್ಗಜಂಗಮ ಹೆಸರಿನಲ್ಲಿ ಸುಳ್ಳು ನೋಂದಣಿ: ಪರಿಶಿಷ್ಟ ಜಾತಿಯಲ್ಲಿರುವ ಬೇಡಜಂಗಮ, ಬುಡ್ಗಜಂಗಮ ಹೆಸರಿನಲ್ಲಿ ಲಿಂಗಾಯಿತ ಸಮಾಜದ ಗುರುಸ್ಥಾನದಲ್ಲಿರುವ ವೀರಶೈವರು, ನಾವು ಬೇಡಜಂಗಮರೆಂದು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಸುಳ್ಳು ಹೇಳಿ ನೋಂದಾಯಿಸಿಕೊಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮಾದಿಗ-ಛಲವಾದಿ ಮುಖಂಡರ ನಿಯೋಗ ಮನವಿ ಮಾಡಿದೆ.