‘ಕಲ್ಯಾಣಪಥ-ಪ್ರಗತಿಪಥ ರಸ್ತೆ ನಿರ್ಮಾಣ’ : ಗುಣಮಟ್ಟ ಕಾಪಾಡಲು ಇಂಜಿನಿಯರ್ಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ

ಬೆಂಗಳೂರು : ಶಾಲೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳಿಗೆ ಗ್ರಾಮಗಳಿಂದ ಸಂಪರ್ಕ ಕಲ್ಪಿಸುವ ಕಲ್ಯಾಣಪಥ ಹಾಗೂ ಪ್ರಗತಿಪಥ ಸರಕಾರದ ಮಹತ್ತರ ಯೋಜನೆಗಳಾಗಿದ್ದು, ಗ್ರಾಮೀಣ ಬದುಕಿನ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಲ್ಲ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಮುಖ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕಲ್ಯಾಣಪಥ ಯೋಜನೆಗಾಗಿ ಸರಕಾರ ಈ ಬಾರಿ ಬಜೆಟ್ನಲ್ಲಿ 1000 ಕೋಟಿ ರೂ. ಅನುದಾನ ನೀಡಿದೆ. ಸರಕಾರ ನೀಡಿರುವ ಅನುದಾನದಿಂದ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಎಂಜಿನಿಯರ್ ಗಳ ಮೇಲಿದೆ, ಯಾವುದೇ ಲೋಪವಿಲ್ಲದಂತೆ ದೀರ್ಘಕಾಲ ಬಾಳಿಕೆ ಬರುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಪ್ರಗತಿಪಥ ಯೋಜನೆಗಾಗಿ ಸರಕಾರ 5200 ಕೋಟಿ ರೂ. ಅನುದಾನ ಒದಗಿಸಿದ್ದು, ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ಅನುಮೋದನೆ ನೀಡಲು ಏಷ್ಯನ್ ಅಭಿವೃದ್ಧಿ ಬ್ಯಾಂಕಿಗೆ ಸೂಚನೆ ನೀಡಿದೆ, ಬ್ಯಾಂಕಿನ ತಂಡವು ಈಗಾಗಲೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ, ಈ ನಡುವೆ ಇಲಾಖೆಯು ರಸ್ತೆಗಳ ಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ನಿರ್ಮಾಣ ಕಾಮಗಾರಿಗಳ ವಿನಃ ಬೇರಾವುದೆ ಸರಕು ಸರಬರಾಜಿನಂತಹ ಪ್ರಕ್ರಿಯೆಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಪ್ರಿಯಾಂಕ್ ಖರ್ಗೆ, ಹೊಸ ಸಂಶೋಧನೆಗಳ ಮೂಲಕ ಮತ್ತಷ್ಟು ಬಾಳಿಕೆ ಬರುವಂತಹ ಸಾಮಗ್ರಿಗಳನ್ನು ನಿರ್ಮಾಣದಲ್ಲಿ ಬಳಸುವ ಮೂಲಕ ಸುಧಾರಣೆಗಳನ್ನು ತರಬೇಕೆಂದು ಸಲಹೆ ಮಾಡಿದರು.
ಇಂಜಿನಿಯರಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಾಡುವ ಸಂಬಂಧ ಹಿರಿಯ ಇಂಜಿನಿಯರ್ ಗಳು ಮತ್ತು ಉತ್ಸಾಹಿ ಕಿರಿಯ ಇಂಜಿನಿಯರ್ ಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಲು ಅವರು ಸಲಹೆ ಮಾಡಿದರು.
ಗ್ರಾಮಗಳ ಜಲಮೂಲಗಳನ್ನು ಸುಸ್ಥಿರಗೊಳಿಸುವ ಮತ್ತು ವಿದ್ಯುತ್ ಭದ್ರತೆ ನೀಡುವ ಹೊಸ ಪರಿಕಲ್ಪನೆ ಇಲಾಖೆ ಹೊಂದಿದ್ದು, ಗ್ರಾಮಗಳ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಸಂರಕ್ಷಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೊಸತನವನ್ನು ಅಳವಡಿಸಿಕೊಳ್ಳಲು ಇಂಜಿನಿಯರ್ ಗಳಿಗೆ ಪ್ರಿಯಾಂಕ್ ಖರ್ಗೆ ತಿಳಿಸಿದರು.
2022-23ನೆ ಸಾಲಿನಲ್ಲಿ ಅನುಮೋದನೆಯಾದ 27,322 ಕಾಮಗಾರಿಗಳಲ್ಲಿ 22,712 ಕಾಮಗಾರಿಗಳು ಪೂರ್ಣಗೊಂಡಿದ್ದು, 3,100 ಕಾಮಗಾರಿಗಳು ಪ್ರಗತಿಯಲ್ಲಿವೆ. 2023-24ನೆ ಸಾಲಿನಲ್ಲಿ ಅನುಮೋದನೆಯಾದ 23,338 ಕಾಮಗಾರಿಗಳ ಪೈಕಿ 15,522 ಕಾಮಗಾರಿಗಳು ಪೂರ್ಣವಾಗಿವೆ, 5,695 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 2024-25ನೆ ಸಾಲಿನಲ್ಲಿ ಅನುಮೋದನೆಗೊಂಡ 25,786 ಕಾಮಗಾರಿಗಳಲ್ಲಿ 11,916 ಕಾಮಗಾರಿಗಳು ಪೂರ್ಣವಾಗಿದ್ದು 8,013 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದೂ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಕಾಮಗಾರಿಗಳು ವಿಳಂಬವಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪ್ರಿಯಾಂಕ್ ಖರ್ಗೆ, ಶಾಸಕರು ಹಾಗೂ ಸಂಸತ್ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಕಾಮಗಾರಿಗಳನ್ನು ಶೀಘ್ರ ಮುಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.