‘ತಲಾ ಆದಾಯ’ ಕರ್ನಾಟಕ ಮೊದಲ ಸ್ಥಾನದಲ್ಲಿರಲು ಗ್ಯಾರಂಟಿಗಳೇ ಕಾರಣ : ಕೆ.ಜೆ.ಜಾರ್ಜ್

ಬೆಂಗಳೂರು : ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ಕಾಂಗ್ರೆಸ್ ನೇತೃತ್ವದ ಸರಕಾರದ ಗ್ಯಾರಂಟಿ ಯೋಜನೆಗಳೇ ಮುಖ್ಯ ಕಾರಣ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ರವಿವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಮತ್ತು ಆಸ್ಪತ್ರೆ ಸಮೂಹ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗ ಮತ್ತು ಮಮತೆಯ ಪ್ರತೀಕ ಎನಿಸಿರುವ ಮಹಿಳೆಯರಿಗೆ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬಿದೆ. ಇದರಿಂದಾಗಿಯೇ ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಸುಮಾರು 5,500 ರೂಪಾಯಿ ಸಂದಾಯ ಆಗಲಿದೆ. ಇದರಿಂದ ಕುಟುಂಬಗಳು ಸಬಲವಾಗುವ ಜತೆಗೆ ರಾಜ್ಯದ ಆರ್ಥಿಕ ವಹಿವಾಟಿನಲ್ಲೂ ಏರಿಕೆ ಕಂಡಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಜನರ ಖರೀದಿ ಶಕ್ತಿ ಹೆಚ್ಚಿದೆ ಎಂದು ಜಾರ್ಜ್ ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಳಿದಂತೆ ಸರಕಾರವು ಎಲ್ಲರನ್ನೊಳಗೊಳ್ಳುವ ಸರಕಾರವಾಗಬೇಕು. ಸಂಪತ್ತು ಕೇವಲ ಒಂದು ವರ್ಗದ ಸ್ವತ್ತಾಗದೆ, ಸಮರ್ಪಕವಾಗಿ ಹಂಚಿಕೆ ಆಗಬೇಕು. ಹಾಗಿದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುವುದು ಎಂದು ಸಚಿವ ಜಾರ್ಜ್ ಇದೇ ವೇಳೆ ಪ್ರತಿಪಾದಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ 3,200ಕಿ.ಮೀ.ಭಾರತ್ ಜೋಡೋ ಪಾದಯಾತ್ರೆ ಕೈಗೊಂಡರು. ಕರ್ನಾಟಕಕ್ಕೆ ಬಂದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಇದ್ದರು. ಪಾದಯಾತ್ರೆ ವೇಳೆ ದೇಶದ ಎಲ್ಲ ವರ್ಗದ ಜನರನ್ನು ಮುಖಾಮುಖಿಯಾಗಿ ಅವರ ಕಷ್ಟ ವಿಚಾರಿಸಿದರು. ಕೋವಿಡ್ ಬಳಿಕ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು, ಅದರಂತೆ ನಮ್ಮ ಸರಕಾರ ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಅಶಕ್ತರಿಗೆ ಶಕ್ತಿ ತುಂಬಲಾಗಿದೆ ಎಂದರು.
ಆಪ್ತ ಕಾಲೇಜ್: ಕೋವಿಡ್ ವೇಳೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಸಮಸ್ಯೆ ಆಯಿತು. ಆಗ ನಮ್ಮ ಕ್ಷೇತ್ರದಲ್ಲಿರುವ ಅಂಬೇಡ್ಕರ್ ಕಾಲೇಜು ನಮ್ಮ ನೆರವಿಗೆ ನಿಂತು, ಬಡವರಿಗೆ ಆರೋಗ್ಯ ಸೇವೆ ಒದಗಿಸಿತು. ಕಾಲೇಜಿನ ಪ್ರಾಂಶುಪಾಲರು 120 ಹಾಸಿಗೆಗಳ ವಾರ್ಡ್ ಸಿದ್ದ ಮಾಡಿಕೊಟ್ಟರು. ಇದಕ್ಕೆ ಅವರಿಗ ನಾನು ಚಿರಋಣಿಯಾಗಿರುತ್ತೇನೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.







