‘ಮನೆ ಕೊಡಿ ಅಥವಾ ಜೈಲಿಗೆ ಬಿಡಿ’ ಕೋಗಿಲು ಬಡಾವಣೆಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಧರಣಿ

ಬೆಂಗಳೂರು : ಅಧಿಕಾರಿಗಳ ಷಡ್ಯಂತ್ರದಿಂದ ಯಲಹಂಕ ಕೋಗಿಲು ಲೇಔಟ್ನಲ್ಲಿ 2025ರ ಡಿ.20ರಂದು ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಕೂಡಲೇ ಪುನರ್ವಸತಿ ಕಲ್ಪಿಸಿ, ಹಕ್ಕುಪತ್ರಗಳನ್ನು ವಿತರಿಸಲು ಆಗ್ರಹಿಸಿ, ಪ್ರಜಾ ವಿಮೋಚನಾ ಚಳವಳಿ, ಬಿಡುಗಡೆಯ ಚಿರತೆಗಳ್ ಸಂಘಟನೆ, ಕೋಗಿಲು ನಿವಾಸಿಗಳ ಹೋರಾಟ ವೇದಿಕೆಯ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಹದಿನೈದು-ಇಪ್ಪತ್ತು ವರ್ಷಗಳಿಂದ ಕೋಗಿಲು ಲೇಔಟ್ನಲ್ಲಿ ವಾಸ ಮಾಡುತ್ತಿದ್ದ ಬಡ ಜನರ ಮನೆಗಳನ್ನು ಜೆಸಿಬಿಯಿಂದ ಏಕಾಏಕಿ ನೆಲಸಮಗೊಳಿಸಿ ಬೀದಿಗೆ ಹಾಕಲಾಯಿತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಜ.1ರಂದು ಹೊಸದಾಗಿ ಮನೆಗಳನ್ನು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇದೀಗ ಐದು ತಿಂಗಳಾದರೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕೋಗಿಲು ಲೇಔಟ್ನಲ್ಲಿ ಮನೆಗಳನ್ನು ಕಳೆದುಕೊಂಡ 230 ಕುಟುಂಬಗಳ ನಿರಾಶ್ರಿತರಿಗೆ ಕೂಡಲೇ ವಾಸಕ್ಕಾಗಿ ಮನೆಗಳನ್ನು ನೀಡಬೇಕು. ಸುಮಾರು 20 ವರ್ಷಗಳಿಂದಲೂ ಕೋಗಿಲು ಗ್ರಾಮದ ಸರ್ವೆ ನಂ.99ರಲ್ಲಿ ಎಲ್ಲ ಜಾತಿಯ ಬಡವರು ಡಾ.ಅಂಬೇಡ್ಕರ್ ನಗರದಲ್ಲಿ ತಮ್ಮ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡಿದ್ದು, 94 ಸಿಸಿ ಕಾಯ್ದೆಯಡಿಯಲ್ಲಿ ಕೂಡಲೇ ಮನೆಗಳಿಗೆ ಹಕ್ಕುಪತ್ರ ದೊರಕಿಸಿಕೊಟ್ಟು ಸಂವಿಧಾನಬದ್ಧ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಮಾನವ ಹಕ್ಕುಗಳನ್ನು ಉಲ್ಲಂಘಿಸಿ, ಮಹಿಳಾ ಮತ್ತು ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು, ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ಬಡವರ ಮನೆಗಳನ್ನು ಧ್ವಂಸ ಪ್ರಕರಣದ ಪ್ರಮುಖ ರೂವಾರಿಗಳಾದ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ‘ನಮಗೆ ಮನೆ ಕೊಡಿ, ಇಲ್ಲವೇ ಜೈಲಿಗೆ ಕಳುಹಿಸಿಕೊಡಿ’ ಎಂದು ಒತ್ತಾಯಿಸಿದರು.
ಬೆಂಗಳೂರು ಉತ್ತರ ನಗರಪಾಲಿಕೆಯ ಜಂಟಿ ಆಯುಕ್ತರು, ಹೆಚ್ಚುವರಿ ಉಪ ಆಯುಕ್ತರು(ಆಡಳಿತ) ಅಧಿಕಾರಿಯಾಗಿ 5 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ 20 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಜಂಟಿ ಆಯುಕ್ತರ ಆಪ್ತ ಕಾರ್ಯದರ್ಶಿ ಶಿವಕುಮಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಧರಣಿಯಲ್ಲಿ ಪಿವಿಸಿ ರಾಜ್ಯಾಧ್ಯಕ್ಷ ಮುನಿಆಂಜನಪ್ಪ, ಕೆಜೆಎಸ್ನ ರಾಜ್ಯಾಧ್ಯಕ್ಷ ಮರಿಯಪ್ಪ, ಬಿಡುಗಡೆಯ ಚಿರುತೆಗಳು ಸಂಘಟನೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಹೋರಾಟಗಾರರಾದ ಮನೋಹರ್ ಎಲವರ್ತಿ, ಸೌಮ್ಯ, ಗೌರಮ್ಮ, ಎಂ.ಗಂಗಣ್ಣ, ಸಾಮರಸ್ಯ ಸಮಿತಿಯ ಕನ್ನಳ್ಳಿ ಕೃಷ್ಣಪ್ಪ, ಭೀಮ್ ಪ್ರಜಾ ಸಂಘಟನೆಯ ರಾಜ್ಯಾಧ್ಯಕ್ಷ ವೈಟ್ಫೀಲ್ಡ್ ಮುರುಗೇಶ್, ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಟಿ.ಯಶವಂತ, ನೂರ್ ಶ್ರೀಧರ್, ಪಿ.ಪಿ.ಅಪ್ಪಣ್ಣ, ಎಂ.ಗಂಗಣ್ಣ ಮತ್ತಿತರರು ಹಾಜರಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ: ಕೋಗಿಲು ಲೇಔಟ್ ಪ್ರಕರಣದಲ್ಲಿ ಮನೆ ಧ್ವಂಸದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಸಂಪೂರ್ಣ ಪುನರ್ವಸತಿ ಹಾಗೂ ಭೂ ಹಕ್ಕುಗಳನ್ನು ಕಲ್ಪಿಸುವಂತೆ ಸ್ಲಂ ಜನರ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಕಲಬುರಗಿ, ವಿಜಯನಗರ, ಚಾಮರಾಜ ನಗರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
‘ಜಿಲ್ಲಾಧಿಕಾರಿಗಳು 24 ಗಂಟೆ ಒಳಗಾಗಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆಯುವುದಾಗಿ ಭರವಸೆ ನೀಡಿರುವುದರಿಂದ ಅನಿರ್ದಿಷ್ಟಾವಧಿ ಧರಣಿ ಹಿಂಪಡೆದುಕೊಳ್ಳಲಾಗಿದೆ. ಒಂದು ವಾರದೊಳಗೆ ಮನೆ ಕಳೆದುಕೊಂಡ ಎಲ್ಲರಿಗೂ ಪುನರ್ ವಸತಿಯ ನೀಲಿನಕ್ಷೆಯನ್ನು ಸರಕಾರ ನೀಡಬೇಕು. ಇಲ್ಲವಾದರೆ, ಮೇ 25ಕ್ಕೆ ಮತ್ತೆ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು’
-ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಹೋರಾಟ ಸಮಿತಿ
.........................






