ಗೊಂದಲದಲ್ಲಿಯೇ ಕೆಎಎಸ್ ಪರೀಕ್ಷೆ ಆರಂಭ; ಅಭ್ಯರ್ಥಿಗಳ ಪರದಾಟ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 2023-24ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ಇಂದಿನಿಂದ ಆರಂಭಗೊಂಡಿದ್ದು, ಪರೀಕ್ಷೆ ಪತ್ರ ಪಡೆಯಲು ಅಭ್ಯರ್ಥಿಗಳು ಪರದಾಟ ನಡೆಸಿದ್ದು ಮಾತ್ರವಲ್ಲದೆ, ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.
384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯದಿಂದ ಅನುಮತಿ ಪಡೆದಿರುವ 185 ಅಭ್ಯರ್ಥಿಗಳಿಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಯ ವರೆಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದ ಕೆಪಿಎಸ್ಸಿ, ಬಳಿಕ ಪ್ರವೇಶ ಪತ್ರ ವಿತರಣೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ಅನೇಕ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆದುಕೊಳ್ಳಲು ಕೆಪಿಎಸ್ಸಿ ಕಚೇರಿಗೆ ತೆರಳಿದ್ದರು. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಶುಕ್ರವಾರವೂ ಕೋರ್ಟ್ ಅನುಮತಿ ದೊರೆತ ಕಾರಣ ಅವರು ಅರ್ಜಿ ಸಲ್ಲಿಸಿ ಹಾಲ್ ಟಿಕೆಟ್ ಪಡೆಯಲು ಬಂದಿದ್ದು, ಶನಿವಾರ ಬೆಳಗ್ಗೆಯ ವರೆಗೂ ಕೆಪಿಎಸ್ಸಿ ಕಚೇರಿಯಲ್ಲಿ ಅಭ್ಯರ್ಥಿಗಳು ಕಾದು ನಿಂತಿದ್ದ ದೃಶ್ಯ ಕಂಡಿತು.
ಆದರೆ, ಪರೀಕ್ಷೆ ಮುಂದೂಡುವಂತೆ ಕೆಪಿಎಸ್ಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಅವರು ನಿಗದಿಯಂತೆ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಬೇಸರ ಹೊರಹಾಕಿದರು.
ಇನ್ನೂ, ಶನಿವಾರ ಅನುಮತಿ ಪಡೆದಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಅರ್ಹತಾ ಪರೀಕ್ಷೆ ಕನ್ನಡ ಬೆಳಗ್ಗೆ 10ರಿಂದ 12 ಗಂಟೆಯ ವರೆಗೆ, ಇಂಗ್ಲಿಷ್ ಪರೀಕ್ಷೆ ಅದೇ ದಿನ ಮಧ್ಯಾಹ್ನ 2ರಿಂದ 4ರ ವರೆಗೆ ನಡೆಯಿತು. ಈ ವೇಳೆ ಹಲವು ಅಭ್ಯರ್ಥಿಗಳು ಗೈರಾಗಿರುವುದು ಕಂಡು ಬಂದಿತು.
ಉಳಿದ ಪೋಷಕ ವೃಂದ(ಆರ್ಪಿಸಿ) 310 ಮತ್ತು ಹೈ.ಕ. 74 ಹುದ್ದೆಗಳಿಗೆ ಮುಖ್ಯ ಪರೀಕ್ಷೆಗಳು ಶನಿವಾರ ನಡೆದಿದ್ದು, ಅದೇ ರೀತಿ, ಮೇ 5, ಮೇ 7 ಮತ್ತು ಮೇ 9 ರಂದು ನಗರದ ಒಟ್ಟು 9 ಉಪಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲ ಜೆರಾಕ್ಸ್, ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ದಯಾಮರಣ ಕೋರಿದ ಅಭ್ಯರ್ಥಿಗಳು: ಕೆಪಿಎಸ್ಸಿ ನಡೆಸುತ್ತಿರುವ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಹುದ್ದೆ ಪರೀಕ್ಷೆಯಲ್ಲಿ ಅನ್ಯಾಯವಾಗಿರುವುದನ್ನು ಖಂಡಿಸಿ ದಯಾಮರಣ ನೀಡುವಂತೆ ರಾಜ್ಯಪಾಲರಿಗೆ ಗ್ರಾಮೀಣ ಭಾಗದ ನೊಂದ ಅಭ್ಯರ್ಥಿಗಳು ಬರೆದು ಅಳಲು ತೋಡಿಕೊಂಡಿದ್ದಾರೆ.
2023-24ನೆ ಸಾಲಿನಲ್ಲಿ ಗ್ರೂಪ್ ಎ ಹಾಗೂ ಗ್ರೂಪ್ ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಪೂರ್ವಭಾವಿ ಪರೀಕ್ಷೆ ಕೂಡಾ ನಡೆಸಿತ್ತು. ಆದರೆ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು 79 ಪ್ರಶ್ನೆಗಳಲ್ಲಿ ಕನ್ನಡ ಭಾಷಾಂತರ ದೋಷ ಕಂಡುಬಂದಿತ್ತು. ಮರು ಪರೀಕ್ಷೆ ಕೋರಿ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಮೇ 3 ರಿಂದ 9ರವರೆಗೆ ದಿನಾಂಕ ನಿಗದಿಪಡಿಸುವ ಮೂಲಕ ತರಾತುರಿಯಲ್ಲಿ ಪರೀಕ್ಷೆ ಮುಗಿಸಲು ಯೋಜಿಸಿದೆ.
ಕನ್ನಡ ಭಾಷಾಂತರ ಲೋಪದ ಬಗ್ಗೆ ಪ್ರಶ್ನಿಸಿದ್ದ 119 ಮಂದಿ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೆಪಿಎಸ್ಸಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಮುಖ್ಯ ಪರೀಕ್ಷೆ ತಯಾರಿಗಾಗಿ ಅವಕಾಶ ನೀಡದೆ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿದೆ. ಗ್ರಾಮೀಣ ಭಾಗದ ಸುಮಾರು 70 ಸಾವಿರ ಕನ್ನಡ ಮಾಧ್ಯಮದ ಆಭ್ಯರ್ಥಿಗಳಿಗೆ ಕೆಪಿಎಸ್ಸಿ ಆತುರದ ನಿರ್ಧಾರದಿಂದ ಅನ್ಯಾಯವಾಗಿದೆ. ಹೀಗಾಗಿ ನಮಗೆ ದಯಾಮರಣ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಆರು ಮಂದಿ ನೊಂದ ಅಭ್ಯರ್ಥಿಗಳು ಸಹಿ ಹಾಕಿ ರಾಜ್ಯಪಾಲರಿಗೆ ಪ್ರತ್ಯೇಕವಾಗಿ ಈ-ಮೇಲ್ ಮಾಡಿದ್ದಾರೆ.







