ವಿಪಕ್ಷದವರ ನಡವಳಿಕೆಯಿಂದ ಸದನದ ಸದಸ್ಯರ ಹಕ್ಕುಚ್ಯುತಿ ಆಗುತ್ತಿದೆ : ಕೃಷ್ಣ ಬೈರೇಗೌಡ

ಬೆಂಗಳೂರು : ಕಾನೂನಿನ ಪ್ರಕಾರ ನಿರ್ಣಯವನ್ನು ಮಂಡಿಸಿದ ಮೇಲೆ ಯಾವುದೇ ಆರೋಪದ ಮೇಲೆ ಚರ್ಚೆಯಾಗಬೇಕು. ಆದರೆ ವಿಪಕ್ಷದವರು ಅದನ್ನು ಪಾಲನೆ ಮಾಡದೇ, ಸುಖಾಸುಮ್ಮನೆ ಸಚಿವರ ಮೇಲೆ ಆರೋಪ ಮಾಡುವಂತಿಲ್ಲ. ಇದು ಸದನದ ಸದಸ್ಯರ ಹಕ್ಕುಚ್ಯುತಿ ಆಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಭಾಧ್ಯಕ್ಷರ ಗಮನಕ್ಕೆ ತಂದರು.
ಮಂಗಳವಾರ ಮಧ್ಯಾಹ್ನದ ನಂತರ ಆರಂಭವಾದ ವಿಧಾನಸಭಾ ಕಲಾಪಕ್ಕೆ ವಿಪಕ್ಷ ಸದಸ್ಯರು ಹೆಗಲ ಮೇಲೆ ಕಪ್ಪು ಬಟ್ಟೆಯನ್ನು ಸುತ್ತಿಕೊಂಡು ಬಂದು ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಧಿಕ್ಕಾರಗಳನ್ನು ಕೂಗುತ್ತಾ ಹಗರಣದ ವಿಚಾರಗಳನ್ನು ಹೇಳಲಾರಂಭಿಸಿದರು.
ಆಗ ಮಾತನಾಡಿದ ಕೃಷ್ಣ ಬೈರೇಗೌಡ, ಈ ಕಾನೂನು ಬಾಹಿರ ಚರ್ಚೆಗಳನ್ನು ಅಧಿಕಾರಿಗಳು ಬರೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಕಾನೂನು ಬಾಹಿರ ವಿಷಯಗಳು ಕಡತಕ್ಕೆ ಹೋಗಬಾರದು. ಹಾಗಾಗಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆಯೂ ಅವರು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಈ ವಿಚಾರದಲ್ಲಿ ಸರಕಾರವು ಉತ್ತರ ನೀಡಲು ತಯಾರಿದ್ದು, ಕಾನೂನು ಪ್ರಕಾರ ನಿರ್ಣಯವನ್ನು ಮಂಡಿಸಿ ಚರ್ಚೆಯಲ್ಲಿ ಭಾಗವಹಿಸುವಂತೆ ವಿಪಕ್ಷದವರನ್ನು ಕೋರಿದರು. ಆದರೆ ವಿಪಕ್ಷದವರು ಮೊದಲು ಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿ ಪಡಿಸಿದರು.
ನಾವು ಆಡಳಿತ ಪಕ್ಷದವರು ಕ್ಷೇತ್ರದಲ್ಲಿ ಇರುವ ಸಮಸ್ಯೆಗಳು, ಜನರ ಸಮಸ್ಯೆಗಳು, ಬರ, ಇವೇ ಮುಂತಾದ ವಿಚಾರಗಳ ಮೇಲೆ ಚರ್ಚೆ ಮಾಡಬೇಕೆಂದು ನಿರ್ಧರಿಸಿ ಬಂದಿದ್ದೆವು. ಆದರೆ ವಿಪಕ್ಷದವರು ಸದನದ ಕಲಾಪವನ್ನು ರಾಜಕೀಯಕ್ಕೆ ಬಲಿ ನೀಡುತಿದ್ದಾರೆ ಎಂದು ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು. ನಿಯಮಾವಳಿಗಳ ಪ್ರಕಾರ ನಿರ್ಣಯವನ್ನು ಮಂಡಿಸಿ, ನಂತರ ಚರ್ಚೆ ನಡೆಸಬೇಕೆಂದು ವಿಪಕ್ಷಗಳಿಗೆ ಮನವಿ ಮಾಡಿದರೂ, ವಿಪಕ್ಷದವರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಗದ್ದಲದ ನಡುವೆಯೆ ಪ್ರಶ್ನೋತ್ತರ, ಶೂನ್ಯವೇಳೆ ಕಲಾಪ ನಡೆಯಿತು. ಅಲ್ಲದೇ, ಗಮನ ಸೆಳೆಯುವ ಸೂಚನೆಯಡಿ ಕೇಳಲಾದ 20 ಪ್ರಶ್ನೆಗಳ ಪೈಕಿ 10 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು. ಆನಂತರ, ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸೇರುವಂತೆ ಸಭಾಧ್ಯಕ್ಷರು ಮುಂದೂಡಿದರು.






