ಬೆಂಗಳೂರು ಇಡೀ ದೇಶಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿ : ಕೃಷ್ಣ ಬೈರೇಗೌಡ
‘ರಾಜಧಾನಿ ಇನ್ನಷ್ಟು ಸುಧಾರಣೆ ಆಗಬೇಕು’

ಬೆಂಗಳೂರು : ರಾಜ್ಯಕ್ಕೆ, ನಮ್ಮ ದೇಶಕ್ಕೆ, ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ. ಇದನ್ನು ಕಾಪಾಡಬೇಕಾಗಿರುವುದು, ಇನ್ನಷ್ಟು ಸುಧಾರಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಜಿಬಿಎ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು, ಕಾರ್ಯಕ್ರಮಗಳು ಹಾಗೂ ಅದಕ್ಕೆ ತೆಗೆದುಕೊಳ್ಳಬೇಕಿರುವ ಕ್ರಮಗಳು ಸೇರಿದಂತೆ ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಗುರುವಾರ ನಗರದ ಕೌನ್ಸಿಲ್ ಸಭಾಂಗಣದಲ್ಲಿ ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ರಾಜಧಾನಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಇನ್ನೂ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ. ಅಲ್ಲದೆ, ಇತರೆ ಕಾಮಗಾರಿಗಳು, ಕಸದ ಸಮಸ್ಯೆ, ತೆರಿಗೆ ಸಂಗ್ರಹ ಸೇರಿದಂತೆ ಹಲವು ವಿಭಾಗದಲ್ಲಿ ತ್ವರಿತಗತಿಯ ಸುಧಾರಣೆ ಆಗಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನನ್ನ ಜೊತೆ ಕೆಲಸ ಮಾಡುವಾಗ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ನಿಮ್ಮ ಅತಿ ಬುದ್ಧಿವಂತಿಕೆ ನಿಮ್ಮ ಕೆಲಸದಲ್ಲಿ ತೋರಿಸಿ, ನನ್ನ ಮೇಲೆ ಪ್ರಯೋಗ ಮಾಡಬೇಡಿ ಎಂದು ಕೆಲವು ಅಧಿಕಾರಿಗಳಿಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ನಾವು ನಿಮ್ಮಿಂದ ಸಾರ್ವಜನಿಕರ ಕೆಲಸ ಕೇಳುತ್ತೇವೆ, ಬಿಟ್ಟರೆ ನಮ್ಮ ವೈಯಕ್ತಿಕ ಯಾವುದೂ ನನಗೆ ಬೇಕಾಗಿಲ್ಲ. ಸಾರ್ವಜನಿಕರಿಗೆ ನಾವು ಒಳ್ಳೆಯ ಆಡಳಿತ ಕೊಡಬೇಕು, ಬೆಂಗಳೂರು ಇನ್ನಷ್ಟು ಸುಧಾರಣೆ ಆಗಬೇಕು ಎಂದು ಕೃಷ್ಣಬೈರೇಗೌಡ ತಾಕೀತು ಮಾಡಿದರು.
ಹಿಂದೆ ನಾನು ಯಾವುದೇ ಇಲಾಖೆಯಲ್ಲಿ ಕೆಲಸ ಮಾಡಿದರೂ ಕೂಡ, ಅಲ್ಲಿ ಆ ಇಲಾಖೆಗೆ ಗೌರವ ತರುವ ಸುಧಾರಣಾ ಕೆಲಸ ಮಾಡಿದ್ದೇನೆ. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಇಲಾಖೆ ಜವಾಬ್ದಾರಿ ತೆಗೆದುಕೊಂಡರೂ ಅಧಿಕಾರ ಬಿಟ್ಟು ಬರುವಾಗ ನಮ್ಮ ಅಧಿಕಾರಿಗಳು ಕೂಡ ಸಮಾಜದಲ್ಲಿ ತಲೆ ಎತ್ತಿಕೊಂಡು ಗೌರವದಿಂದ ಓಡಾಡಬಹುದು. ಆ ರೀತಿಯಲ್ಲಿ ಬದಲಾವಣೆ ತರುವ ಕೆಲಸ ಮಾಡಿದ್ದೇನೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ನಮ್ಮ ಸರಕಾರದ ಮೇಲೆ ನಿಮ್ಮ ಸಂಪೂರ್ಣ ಸಹಕಾರ, ಬೆಂಬಲವಿದ್ದರೆ ಬೆಂಗಳೂರಲ್ಲೂ ಕೂಡ ನಾವೂ-ನೀವು ಸಮಾಜದಲ್ಲಿ ತಲೆ ಎತ್ತಿಕೊಂಡು ಹೆಮ್ಮೆಯಿಂದ ಓಡಾಡಬಹುದು ಆ ರೀತಿ ಸುಧಾರಣೆ ತರಬಹುದು ಎಂದು ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಸರಕಾರದ ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ.ಜಗದೀಶ್, ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.






