ಅವಧಿ ಪೂರ್ಣಗೊಳಿಸಿದ ಐವರು ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ

ಬೆಂಗಳೂರು : ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾದ ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ ಬುಡ್ನ ಸಿದ್ದಿ, ಡಾ.ತಳವಾರ ಸಾಬಣ್ಣ ಹಾಗೂ ರಮೇಶ್ ಬಾಬು ಅವರ ಸದಸ್ಯತ್ವದ ಅವಧಿಯು ಜು.21ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅವಧಿ ಪೂರ್ಣಗೊಳಿಸಿದ ಐವರು ಸದಸ್ಯರನ್ನು ಗೌರವಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದ ಬಳಿಕ ಮಾತನಾಡಿದರು.
ಈ ಐವರು ಸದಸ್ಯರು ನಾಮನಿರ್ದೇಶನದ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದು, ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ಜ್ವಲಂತ ಸಮಸ್ಯೆಗಳನ್ನು ವಿಧಾನಪರಿಷತ್ತಿನ ಅಧಿವೇಶನಗಳಲ್ಲಿ ಪ್ರಸ್ತಾಪಿಸಿ, ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆಗಳ ಮೂಲಕ ಸದನದ ಕಾರ್ಯಚಟುವಟಿಕೆಗಳಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಸಭಾಪತಿ ಹೇಳಿದರು.
ಶಾಸಕರಾಗಿ ಇವರು ಸರಕಾರದ ಕಾರ್ಯವೈಖರಿಯ ಕುರಿತು ಸಚಿವರನ್ನು ಪ್ರಶ್ನಿಸುವ ಮೂಲಕ ಉತ್ತರದಾಯಿತ್ವವನ್ನು ಬಲಪಡಿಸುವುದು, ಸಾರ್ವಜನಿಕ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ವಿವಿಧ ಶಾಸನ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ಸರಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಪರಿಶೀಲಿಸುವುದು ಮತ್ತು ಶಾಸನಗಳ ಪರಿಶೀಲನೆ, ಚರ್ಚೆ ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸುವ ಮೂಲಕ ತಮ್ಮ ಶಾಸನಾತ್ಮಕ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ, ಜನರ ಆಶೋತ್ತರಗಳಿಗೆ ಸದನದಲ್ಲಿ ಧ್ವನಿಯಾಗುವಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಆದರ್ಶಪ್ರಾಯ ಸೇವೆ ಸಲ್ಲಿಸುವಲ್ಲಿ ಇವರು ವಹಿಸಿದ ಪಾತ್ರ ವಿಧಾನಪರಿಷತ್ತಿನ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ. ಇವರ ಅನುಭವ, ಜ್ಞಾನ, ವಿಚಾರಪಕ್ವತೆ ಮತ್ತು ಜನಪರ ಕಾಳಜಿ ಸದನದ ಚರ್ಚೆಗಳಿಗೆ ವಿಶೇಷ ಗೌರವ ಮತ್ತು ಗಂಭೀರತೆಯನ್ನು ತಂದುಕೊಟ್ಟಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಸದಸ್ಯತ್ವದ ಅವಧಿ ಪೂರ್ಣಗೊಳ್ಳುವುದು ಒಂದು ಹಂತದ ಸಮಾಪ್ತಿಯಷ್ಟೇ ಹೊರತು, ಸಾರ್ವಜನಿಕ ಸೇವೆಯ ಪಯಣದ ಅಂತ್ಯವಲ್ಲ. ಮುಂದಿನ ದಿನಗಳಲ್ಲಿಯೂ ಅವರ ಅಪಾರ ಅನುಭವ, ಮಾರ್ಗದರ್ಶನ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ರಾಜ್ಯ ಹಾಗೂ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿದ್ದಾರೆ ಎಂಬ ದೃಢ ವಿಶ್ವಾಸ ನನಗಿದೆ ಎಂದು ಸಭಾಪತಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅವಧಿ ಪೂರ್ಣಗೊಳಿಸಿದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.






