ಕಾಲ ಕಾಲಕ್ಕೆ ಪಂಚಾಯಿತಿ ಚುನಾವಣೆಗಳು ನಡೆಯಬೇಕು : ಎಂ.ವೀರಪ್ಪ ಮೊಯ್ಲಿ

ಬೆಂಗಳೂರು, ಮೇ 10: ಲೋಕಸಭೆ, ವಿಧಾನಸಭೆ ಚುನಾವಣೆಗಳಷ್ಟೇ ಪಂಚಾಯಿತಿ ಚುನಾವಣೆಗೂ ಮಹತ್ವವಿದೆ. ಪಂಚಾಯಿತಿಗಳು ಸ್ಥಳೀಯ ಸರಕಾರಗಳೇ ಆಗಿರುವುದರಿಂದ ಕಾಲ ಕಾಲಕ್ಕೆ ಆ ಚುನಾವಣೆಗಳನ್ನು ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
ರವಿವಾರ ನಗರದಲ್ಲಿರುವ ಗಾಂಧಿ ಭವನದಲ್ಲಿ ಕರ್ನಾಟಕ ಪಂಚಾಯತ್ರಾಜ್ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ‘16ನೇ ಹಣಕಾಸು ಆಯೋಗ ಮತ್ತು 5ನೇ ರಾಜ್ಯ ಹಣಕಾಸು ಆಯೋಗಗಳ ವರದಿಗಳ’ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮ ಸಭೆಗಳು ಪಂಚಾಯತ್ ವ್ಯವಸ್ಥೆಗೆ ಭದ್ರ ಅಡಿಪಾಯವಾಗಿವೆ. ಹಾಗಾಗಿ ಗ್ರಾಮ ಸಭೆಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದರು.
ಯಾವುದೇ ಚುನಾವಣೆಗಳು ಕಾಲಕಾಲಕ್ಕೆ ನಡೆಯದಿದ್ದರೆ ಅನುದಾನ ಹಂಚಿಕೆಯಾಗಲ್ಲ. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯುವಂತಾಗಬೇಕು. ಕರ್ನಾಟಕದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು. ಇಲ್ಲದೇ ಇದ್ದರೆ ಪ್ರಜಾಪ್ರಭುತ್ವದ ಆಶಯವನ್ನು ಅಣಕಿಸದಂತಾಗಲಿದೆ. ಚುನಾಯಿತ ಆಡಳಿತವಿದ್ದಾಗ ಸಹಭಾಗಿತ್ವದಿಂದ ಅಭಿವೃದ್ದಿಗೂ ಹೆಚ್ಚಿನ ಅವಕಾಶ ಇರಲಿದೆ. ಗಾಂಧಿ ಅವರು ಪಂಚಾಯತ್ರಾಜ್ ವ್ಯವಸ್ಥೆಗೆ ವಿಶೇಷವಾಗಿ ಪ್ರಾಮುಖ್ಯತೆ ಕೊಟ್ಟಿದ್ದರು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಯಾವುದೇ ಪಕ್ಷದ ಸರಕಾರವಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಅಡ್ಡಿ ಇದ್ದೇ ಇರುತ್ತದೆ. ಹಿತಾಸಕ್ತಿಗಳು ಪಕ್ಷದ ಒಳಗೂ, ಹೊರಗೂ ಇದ್ದೇ ಇರುತ್ತವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಪಂಚಾಯಿತಿ ಚುನಾವಣೆಗೆ ಅಡ್ಡಿಯಾಗಿ, ಆಗ ಪಂಚಾಯಿತಿ ರಾಜ್ ಸಚಿವರಾಗಿದ್ದ ಎಂ.ವೈ.ಘೋರ್ಪಡೆ ರಾಜೀನಾಮೆ ನೀಡಿದ್ದರು. ಮರು ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಕಡಿಮೆ ಸ್ಥಾನ ಪಡೆಯಬೇಕಾಯಿತು. ತಮಿಳುನಾಡಿನಲ್ಲೂ ಈಗ ಹೇಗೆ ಸರಕಾರ ಬದಲಿಸಿದರು ಎನ್ನುವ ಅರಿವು ಆಡಳಿತ ನಡೆಸುವವರಿಗೆ ಇರಲೇ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪಂಚಾಯತ್ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಜೀವಾಳ. ನಮ್ಮ ಅಧಿಕಾರದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿತ್ತು. ಹಣಕಾಸು ಆಯೋಗಗಳ ಮೂಲಕ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವ ಪರಂಪರೆ ಹಿಂದಿನಿಂದಲೂ ಇದೆ. ಆದರೆ, ಆಯೋಗಳ ವರದಿ ಜಾರಿ, ಅನುದಾನ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳ ಹಂತದಲ್ಲೂ ಅಡೆತಡೆಗಳು ಆಗುತ್ತವೆ. ಇವನ್ನೆಲ್ಲಾ ದಾಟಿಕೊಂಡು ವರದಿ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ವೀರಪ್ಪ ಮೊಯ್ಲಿ ಆಶಯ ವ್ಯಕ್ತಪಡಿಸಿದರು.
ಕೇರಳಂನ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಾನಂದ್ ಮಾತನಾಡಿ, ಹಣಕಾಸು ಆಯೋಗಗಳ ಮೂಲಕ ಕೇಂದ್ರ ಸರಕಾರ ಪಂಚಾಯಿತಿಗಳು, ನಗರ ಪ್ರದೇಶಗಳ ಅಭಿವೃದ್ದಿಗೆ ಆರ್ಥಿಕ ನೆರವು ನೀಡುತ್ತದೆ. ಆದರೆ, ರಾಜ್ಯ ಸರಕಾರಗಳು ಅಲ್ಲಿನ ಬೇಡಿಕೆಗೆ ಅನುಗುಣವಾಗಿ ಯೋಜನೆ ರೂಪಿಸಿ ಬಳಕೆ ಮಾಡುತ್ತವೆ. ಕೇರಳದಲ್ಲಿ ಪಂಚಾಯಿತಿಗಳಿಗೆ ಶೇ.80 ರಷ್ಟು ಒತ್ತು ನೀಡಿದರೆ, ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಅಭಿವೃದ್ದಿಗೆ ತಲಾ ಶೇ.50ರಲ್ಲಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ 21 ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಜೊತೆಗೆ ಸರಕಾರ ಸೇರಿ ಇತರ ಇಲಾಖೆಗಳು ಜಾರಿಗೊಳಿಸಿರುವ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಗ್ರಾಮಸ್ಥರ ಬಹುತೇಕ ಬೇಡಿಕೆಗಳು ಈಡೇರಿಸಬಹುದು. ಸರಕಾರದ, ಸಂಘ-ಸಂಸ್ಥೆಗಳ ಮತ್ತು ಪಂಚಾಯತ್ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿಯೇ ಆಗಬೇಕು ಎಂದು ಹೇಳಿದರು.
ಪಂಚಾಯಿತಿ ಪರಿಷತ್ ಸಲಹೆಗಾರ ಎಂ.ಕೆ.ಕೆಂಪೇಗೌಡ ಮಾತನಾಡಿ, ನಗರೀಕರಣದ ಪರಿಣಾಮವಾಗಿ ಹೆಚ್ಚು ಪಟ್ಟಣಪಂಚಾಯಿತಿ, ಪುರಸಭೆ ರಚಿಸುವ ಬದಲು ಪಂಚಾಯಿತಿ ರೂಪದ ಆಡಳಿತ ಪರಿಣಾಮಕಾರಿ ಆಗಿರಲಿದೆ. ಕೇರಳ ಇದಕ್ಕೆ ಒತ್ತು ನೀಡಿದೆ. ಕರ್ನಾಟಕವೂ ಪಂಚಾಯಿತಿಗಳ ಸಬಲೀಕರಣ, ಅನುದಾನ ಬಳಕೆ, ಹೊಸ ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅನುದಾನ ಲಭ್ಯತೆ ವಿವರ, ಕಾರ್ಯಕ್ರಮ ಜಾರಿ ಫಲಕಗಳನ್ನು ಪಂಚಾಯಿತಿಗಳ ಎದುರು ಪ್ರಕಟಿಸುವುದು ಒಳ್ಳೆಯದು ಎಂದು ಹೇಳಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪ್ರಾಧ್ಯಾಪಕ ವಿ.ಎನ್.ಅಲೋಕ್ ಮಾತನಾಡಿ, 16ನೇ ಹಣಕಾಸು ಆಯೋಗವು 8 ಲಕ್ಷ ಕೋಟಿ ರೂ. ಅನುದಾನವನ್ನು ನೀಡಲಿದ್ದು, ಇದರಲ್ಲಿ ನಗರಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿಗೆ ಶೇ.50ರಷ್ಟು ಮೀಸಲಿಡಲಾಗಿದೆ. ಅನುದಾನ ಪಂಚಾಯಿತಿಗಳಿಗೆ ಸಮರ್ಪಕವಾಗಿ ತಲುಪಲು ಕ್ರಮ ವಹಿಸಬೇಕಿದೆ. ಸಚಿವಾಲಯಗಳಿಂದ ಸೂಚನೆಗಳು ಬಂದಾಗ ರಾಜ್ಯಗಳು ಎಚ್ಚೆತ್ತುಕೊಳ್ಳುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಪರಿಷತ್ ಕಾರ್ಯಾಧ್ಯಕ್ಷ ವಿ.ವೈ.ಘೋರ್ಪಡೆ, ಉಪಾಧ್ಯಕ್ಷ ಸೌಭಾಗ್ಯ ಬಸವರಾಜನ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸತೀಶ್, ಕೋಶಾಧಿಕಾರಿ ಡಾ.ಚಿಕ್ಕಕೊಮಾರಿಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.






