ʼವಿಬಿ-ಜಿ ರಾಮ್ ಜಿʼ ಜಾರಿ ಮಾಡಲು ನಾವು ಬಿಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ : ನರೇಗಾ ಯೋಜನೆಯನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದ್ದು, ರಾಜ್ಯ ಸರಕಾರದ ಮೇಲೆ ಭಾರ ಹಾಕಿದೆ. ʼವಿಬಿ-ಜಿ ರಾಮ್ ಜಿʼ ಕಾಯ್ದೆ ಜಾರಿಗೆ ತರಲು ನಾವು ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹುಬ್ಬಳ್ಳಿಯ ಮಂಟೂರ ರೋಡಿನಲ್ಲಿ ನಡೆದ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗೆ ಬೆಂಬಲವಾಗಿದ್ದ ಕಾನೂನನ್ನು ಮೂಲೆಗೆ ತಳ್ಳಿದೆ. ನಾವು ಸುಮ್ಮನೆ ಬಿಡುವುದಿಲ್ಲ. ʼವಿಬಿ-ಜಿ ರಾಮ್ ಜಿʼ ಅನುಷ್ಠಾನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಅನುದಾನ ಹಂಚಿಕೆಯಲ್ಲೂ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಂತಹ ಮೊಂಡ ಸರಕಾರಕ್ಕೆ ಪಾಠ ಕಲಿಸಲು ಬಡವರು ಒಂದಾಗಬೇಕು ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರದಿಂದ ಮಾತ್ರ ಜನಪರ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತದೆ. ಇಂದಿರಾ ಗಾಂಧಿ ಮತ್ತು ದೇವರಾಜ ಅರಸ್ ಅವರ ಕಾಲದಲ್ಲಿ ಬಡವರಿಗೆ ಮನೆ ಕೊಡುವ ಕಾರ್ಯಕ್ರಮ ಆರಂಭಗೊಂಡಿತು. ಈಗ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆ ಉದ್ಘಾಟನೆ ಮಾಡಲಾಗಿದೆ. ಬೇರೆ ರಾಜ್ಯದಲ್ಲಿ ಬಡವರಿಗೆ 1 ಲಕ್ಷಕ್ಕೆ ಮನೆ ಕಟ್ಟಿಸಿ ಕೊಡುವ ಕೆಲಸ ನಡೆದಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರಕಾರ ಈ ಸಾಧನೆ ಮಾಡಿದೆ ಎಂದರು.
ವಸತಿ ರಹಿತರ ಕನಸಿನ ಸೂರಿಗೆ ರಾಜ್ಯದ ಗ್ಯಾರಂಟಿ ಸರಕಾರ ಆಸರೆಯಾಗಿದ್ದು, ರಾಜ್ಯದೆಲ್ಲೆಡೆ 8ಲಕ್ಷ ಮನೆಗಳ ನಿರ್ಮಾಣ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ 8 ಲಕ್ಷ ಮನೆಗಳ ನಿರ್ಮಾಣ ಗುರಿಯನ್ನು ಹೊಂದಲಾಗಿದೆ. ಅದರಂತೆ ಈಗಾಗಲೇ ಸುಮಾರು ಎರಡುವರೆ ಲಕ್ಷ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳು ರಾಜ್ಯ ಸರಕಾರದಿಂದ ನಡೆಯಲಿವೆ. ಅಪಾರ ಸಂಖ್ಯೆಯಲ್ಲಿ ಜನರು ಇದೇ ಮೊದಲ ಬಾರಿಗೆ ದೊಡ್ಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮನೆಗಳನ್ನು ಅತ್ಯುತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಎಲ್ಲ ಕಡೆಗೆ ತಲುಪುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸಹ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂದ ಅವರು, ಬಡವರಿಗೆ ಸೂರು ಕಲ್ಪಿಸುವ ಯೋಜನೆಗಳಿಗೆ ಇಂದಿರಾಗಾಂಧಿ ಹಾಗೂ ಡಿ.ದೇವರಾಜ ಅರಸು ಅವರ ಕಾಲದಲ್ಲೇ ಬುನಾದಿ ಹಾಕಲಾಗಿತ್ತು. ಈಗ ರಾಜ್ಯದ ಕಾಂಗ್ರೆಸ್ ಸರಕಾರವು ಸುಮಾರು 7.50 ಲಕ್ಷ ಬೆಲೆ ಬಾಳುವ ಮನೆಗಳನ್ನು ಕೇವಲ 1 ಲಕ್ಷಕ್ಕೆ ನೀಡಲಾಗುತ್ತಿದೆ. ಒಳ್ಳೆಯ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಡವರ ಬಗ್ಗೆ ಕಾಳಜಿ ವಹಿಸುವವರು ಮಾತ್ರ ಇಂತಹ ಕಾರ್ಯ ಮಾಡಲು ಸಾಧ್ಯ. ರಾಜ್ಯದಾದ್ಯಂತ ಇಂತಹ ಮನೆಗಳು ನಿರ್ಮಾಣವಾಗಬೇಕು. ಜನರಿಗೆ ಅನ್ನ, ಸೂರು, ಕೆಲಸ ನೀಡುವ ಕಾರ್ಯಗಳಾಗಬೇಕು. ಅಲ್ಲದೆ, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.







