ರಾಮಮಂದಿರ ಲೂಟಿಗೆ ಬಿಜೆಪಿ-ಆರೆಸ್ಸೆಸ್ ಕಾರಣ : ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಬೆಂಗಳೂರು : ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಕೆ ಮಾಡುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್, ಅಯೋಧ್ಯೆಯಲ್ಲಿ ರಾಮ ಮಂದಿರದ ಹೆಸರಿನಲ್ಲಿ ನೀಡಲಾದ ದೇಣಿಗೆ ಲೂಟಿಗೆ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ರವಿವಾರ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಬಳಿ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಹೆಸರಿನಲ್ಲಿ ಏನೆಲ್ಲಾ ಲೂಟಿ ನಡೆಯುತ್ತಿದೆ. ಇತ್ತೀಚಿಗೆ ಅಯೋಧ್ಯೆಯಲ್ಲಿ ಏನಾಯಿತು? ಇಲ್ಲಿ ಲೂಟಿಯನ್ನು ಬಡವರು, ದಲಿತರು, ರೈತರು ಮಾಡಿದ್ದಲ್ಲ. ಆರೆಸ್ಸೆಸ್ ಮತ್ತು ಬಿಜೆಪಿಗೆ ಸಂಬಂಧಿಸಿದ ಜನರೇ ಇದನ್ನು ಮಾಡಿದ್ದಾರೆ. ರಾಮ ಮಂದಿರದ ಹೆಸರಿನಲ್ಲಿ ದಾನ ಮಾಡಿದ ಚಿನ್ನ, ಬೆಳ್ಳಿ ಮತ್ತು ಇಟ್ಟಿಗೆಗಳನ್ನು ಸಹ ಲೂಟಿ ಮಾಡಲಾಗಿದೆ ಎಂದು ಅವರು ಆಪಾದಿಸಿದರು.
ಪ್ರತಿದಿನ ಬಿಜೆಪಿಯವರು ದೇವರ ಹೆಸರನ್ನು ಜಪಿಸುತ್ತಾರೆ, ಆದರೆ ದೇವರ ಹೆಸರಿನಲ್ಲೇ ಲೂಟಿಯಲ್ಲಿ ತೊಡಗುತ್ತಾರೆ ಎಂದ ಅವರು, ಬಿಜೆಪಿ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುತ್ತಿದ್ದರೆ, ಚುನಾವಣಾ ತಂತ್ರದ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.




