Mandya | ಕೈಗಾರಿಕೆಗೆ ಭೂಮಿ ನೀಡಲು ರೈತರ ವಿರೋಧ: ಸಭೆ ಬಹಿಷ್ಕರಿಸಿ ಪ್ರತಿಭಟನೆ

ಮಂಡ್ಯ : ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ಕೊಡುವುದಿಲ್ಲವೆಂದು ಮದ್ದೂರು ತಾಲೂಕಿನ ಗೆಜ್ಜಲಗೆರೆ, ಕುದುರಗುಂಡಿ ಹಾಗೂ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮಗಳ ರೈತರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸದರಿ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಈ ಬಗ್ಗೆ ರೈತರಿಂದ ಅಹವಾಲು ಹಾಗೂ ಅಭಿಪ್ರಾಯ ಕೇಳಲು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು.
ಭೂಮಿಗೆ ನೀಡಲಾಗುವ ಪರಿಹಾರದ ಮೊತ್ತದ ಬಗ್ಗೆ ರೈತರಲ್ಲಿ ಅಸಮಾಧಾನವಿದ್ದರೆ ಹೆಚ್ಚು ಪರಿಹಾರ ನೀಡುವಂತೆ ಮನವಿ ಸಲ್ಲಿಸಬಹುದು. ಈ ಮನವಿಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಭೆಗೆ ತಿಳಿಸಿದರು. ಆದರೆ, ಇದಕ್ಕೆ ಬಹುತೇಕ ರೈತರು ವಿರೋಧ ವ್ಯಕ್ತಪಡಿಸಿದರು.
ಪ್ರಾಂತ ರೈತಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ರಾಜ್ ಮಾತನಾಡಿ, ಕುದುರಗುಂಡಿ ಕಾಲನಿಯಲ್ಲಿ ವಲಸೆ ಕೂಲಿಕಾರರು, ದಲಿತರು ವಾಸಿಸುತ್ತಿದ್ದು, ಸರಕಾರ ನೀಡಿದ ಭೂಮಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಜಮೀನು ನಿವಾಸಿಗಳಿಗೆ ಜೀವನಾಧಾರ. ರೈತರ ಗಮನಕ್ಕೂ ತಾರದೆ 2001ರಲ್ಲಿ ಮತ್ತು 2021ರಲ್ಲಿ ಭೂ ಸ್ವಾಧೀನಕ್ಕೆ ಏಕಾಏಕಿ ಅಧಿಸೂಚನೆ ಹೊರಡಿಸಲಾಗಿದೆ. ಈಗ 25 ವರ್ಷಗಳ ನಂತರ ನೊಟೀಸ್ ನೀಡಲಾಗಿದೆ. ಇದರಲ್ಲಿ ಕೆಲವು ಪ್ರಭಾವಿಗಳ ಕೈವಾಡ ಅಡಗಿದ್ದು ಭೂಕಬಳಿಕೆಯ ಹುನ್ನಾರವಾಗಿದೆ ಎಂದು ಆರೋಪಿಸಿದರು. ಸಭೆಯಲ್ಲಿ ಬೆಂಗಳೂರಿನ ವಿಶೇಷ ಭೂ ಸ್ವಾಧೀನ ಅಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ದಿನೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಐಎಡಿಬಿಯವರು ಕುದುರಗುಂಡಿ ಕಾಲನಿಯ ಬಡ ದಲಿತರ ಭೂಮಿ ಕಸಿದುಕೊಳ್ಳಲು ಹೊರಟಿರುವುದು ಖಂಡನೀಯ. ನ್ಯಾಯಾಲಯದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ತಡೆಯಾಜ್ಞೆ ಇದೆ. ಇಂತಹ ಸಂದರ್ಭಗಳಲ್ಲಿ ಭೂಮಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಕಾನೂನು ಉಲ್ಲಂಘನೆ.
-ಎನ್.ಎಲ್.ಭರತ್ರಾಜ್, ಪ್ರಾಂತ ರೈತಸಂಘದ ಜಿಲ್ಲಾ ಸಂಚಾಲಕ






