ಜೂ.10ಕ್ಕೆ ಉತ್ಪಾದನಾ ಮಂಥನ ಸಮಾವೇಶ : ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ಕರ್ನಾಟಕವನ್ನು ‘ಜಾಗತಿಕ ತಯಾರಿಕಾ ಕೇಂದ್ರ’ವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ‘ಚಿಂತನ–ಮಂಥನ’ಕ್ಕೆ ವೇದಿಕೆ ಕಲ್ಪಿಸಲಿರುವ ಒಂದು ದಿನದ ‘ಉತ್ಪಾದನಾ ಮಂಥನ್’ ಸಮಾವೇಶವು ಜೂ.10ರಂದು ನಗರದ ತಾಜ್ ವೆಸ್ಟ್ ಎಂಡ್ ಹೊಟೇಲ್ನಲ್ಲಿ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಶುಕ್ರವಾರ ನಗರದ ಖನಿಜ ಭವನದಲ್ಲಿ ಉತ್ಪಾದನಾ ಮಂಥನ ಸಮಾವೇಶದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸ್ಪಷ್ಟ ಹಾಗೂ ಕಾರ್ಯಸಾಧ್ಯವಾದ ನೀಲನಕ್ಷೆ ರೂಪಿಸುವುದು ‘ಉತ್ಪಾದನಾ ಮಂಥನ’ದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ತಾಜ್ ವೆಸ್ಟ್ ಎಂಡ್ ಹೊಟೇಲ್ನಲ್ಲಿ ದಿನಪೂರ್ತಿ ನಡೆಯಲಿರುವ ಸಮಾವೇಶದಲ್ಲಿ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದು ಬರೀ ಸಮಾವೇಶ ಆಗಿರುವುದಿಲ್ಲ. ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರ್ಣಾಯಕ ಹೆಜ್ಜೆಯಾಗಿರಲಿದೆ ಎಂದು ಅವರು ತಿಳಿಸಿದರು.
ಕೈಗಾರಿಕೆ ಹಾಗೂ ನವೋದ್ಯಮಗಳ ಪರಿಣತರ ಸಲಹೆ ಪಡೆದು ಭವಿಷ್ಯಕ್ಕೆ ಆದ್ಯತೆ ನೀಡುವ, ನಾವೀನ್ಯತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಪರಿಹಾರಗಳನ್ನು ಎಲ್ಲರ ಸಹಯೋಗದಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ವಲಯಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಪ್ರತ್ಯೇಕ ಕ್ರಮಗಳು, ಬಂಡವಾಳ ಹೂಡಿಕೆ ಅವಕಾಶಗಳ ಅನಾವರಣ, ಕೈಗಾರಿಕೆಗಳಿಗೆ ಹೆಚ್ಚು ಸೂಕ್ತವಾಗಿರುವ ನೀತಿಗಳನ್ನು ರೂಪಿಸಲು ಈ ಸಮಾವೇಶವು ರಾಜ್ಯ ಸರಕಾರಕ್ಕೆ ನೆರವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ತಯಾರಿಕೆ ಹಾಗೂ ರಫ್ತು ವಹಿವಾಟು ಹೆಚ್ಚಿಸುವುದು ಹಾಗೂ ರಾಜ್ಯದಾದ್ಯಂತ ಸುಸ್ಥಿರ ರೀತಿಯಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯಾಗಿದೆ ಎಂದು ಅವರು ತಿಳಿಸಿದರು.
ವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್ (ಬಿಡಿಭಾಗಗಳು) ಸೆಮಿಕಂಡಕ್ಟರ್ಸ್, ಭಾರಿ ಯಂತ್ರೋಪಕರಣ-ಮಷಿನ್ಟೂಲ್ಸ್, ರೋಬೊಟಿಕ್ಸ್, ವಾಹನ ತಯಾರಿಕೆ, ಬಿಡಿಭಾಗಗಳು ಮತ್ತು ವಿದ್ಯುತ್ಚಾಲಿತ ವಾಹನಗಳು(ಇವಿ), ಜವಳಿ, ಗ್ರಾಹಕ ಉತ್ಪನ್ನಗಳು(ಎಫ್ಎಂಸಿಜಿ, ಪಾದರಕ್ಷೆ ಹಾಗೂ ಆಟಿಕೆ) ಒಳಗೊಂಡಿರುವ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿನ ರಾಜ್ಯದ ಸಾಧನೆ ಮುನ್ನಡೆಸಲು ಹಮ್ಮಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮ ದಿಗ್ಗಜರು ಈ ಸಮಾವೇಶದಲ್ಲಿ ಸರಕಾರಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಉದ್ಯಮ ದಿಗ್ಗಜರ ಜೊತೆಗಿನ ವಿಚಾರ ಮಂಥನಕ್ಕೆ ಸಮಾವೇಶವು ವೇದಿಕೆ ಒದಗಿಸಲಿದೆ. ರಾಜ್ಯದ ಹೂಡಿಕೆ ಆಕರ್ಷಣೆ ಹಾಗೂ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿ ರಾಜ್ಯವು ಕ್ರಮಿಸಬೇಕಾದ ಅಭಿವೃದ್ಧಿ ಪಥದ ದಿಕ್ಸೂಚಿ ಇದಾಗಿರಲಿದೆ. ರಾಜ್ಯದ ಬಂಡವಾಳ ಹೂಡಿಕೆಯ ಆಕರ್ಷಣೆ ಹೆಚ್ಚಿಸಲು ಸರಕಾರಕ್ಕೆ ವಲಯವಾರು ನೀಲನಕ್ಷೆ ರೂಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖ 6 ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು ಮತ್ತು ತಯಾರಿಕಾ ಚಟುವಟಿಕೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉದ್ಯಮ ದಿಗ್ಗಜರು ಸರ್ಕಾರಕ್ಕೆ ನೀಲನಕ್ಷೆ ಸಿದ್ಧಪಡಿಸಿ ಕೊಡಲಿದ್ದಾರೆ. ಪ್ರಮುಖ ಕಂಪನಿಗಳಾದ ಕಾಲಿನ್ಸ್ ಏರೊಸ್ಪೇಸ್, ಮಹೀಂದ್ರಾ ಏರೊಸ್ಪೇಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಅಪ್ಲೈಡ್ ಮಟೇರಿಯಲ್ಸ್, ಏರ್ ಇಂಡಿಯಾ, ಬಿಐಎಲ್ ಸೇರಿದಂತೆ 58 ಕೈಗಾರಿಕೆಗಳು ಹಾಗೂ 10 ನವೋದ್ಯಮಗಳು ಸಮಾವೇಶದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ ಎಂದು ಅವರು ಮಾಹಿತಿ ನೀಡಿದರು.
ಏರ್ ಇಂಡಿಯಾದ ಪ್ರಾಜೆಕ್ಟ್ಸ್ ಮುಖ್ಯಸ್ಥ ಜಿತಿನ್ ಗುಲಾಟಿ, ಅಲ್ಫಾ ಡಿಸೈನ್ ಟೆಕ್ನಾಲಜೀಸ್ನ ಅಧ್ಯಕ್ಷ ಕರ್ನಲ್ ಎಚ್.ಎಸ್.ಶಂಕರ್, ಬಿಐಎಎಲ್-ನ ಸಿಇಒ ಹರಿ ಮಾರಾರ್, ಕಾಲಿನ್ಸ್ ಏರೋಸ್ಪೇಸ್-ನ ಆಪರೇಷನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿನು ಕೃಷ್ಣನ್ಕುಟ್ಟಿ, ಮಹೀಂದ್ರಾ ಏರೋಸ್ಪೇಸ್ನ ಸಿಒಒ ಕಾರ್ತಿಕ್ ಕೃಷ್ಣಮೂರ್ತಿ, ಹಿಟಾಚಿ ಎನರ್ಜಿ-ಯ ಸಿಇಒ ವೇಣು ನುಗುರಿ, ಜಿಎಸ್ಎಸ್ಎಂ ಐಎಫ್ಬಿ-ಯ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಸುದಿಪ್ತಾ ಗುಪ್ತಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಬಿಇಎಲ್-ನ ಅಧ್ಯಕ್ಷ ಮನೋಜ್ ಜೈನ್, ಟಾಟಾ ಹಿಟಾಚಿ-ಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ಬೌನ್ಸ್-ನ ಸಹ-ಸಂಸ್ಥಾಪಕ ಅನಿಲ್ ಜಿ., ಹೋಂಡಾ-ದ ಕಾರ್ಯಾಚರಣೆ ಮುಖ್ಯಸ್ಥ ಸುನಿಲ್ ಮಿತ್ತಲ್, ರಿವೇರ್-ನ ತಯಾರಿಕಾ ವಿಭಾಗದ ಮುಖ್ಯಸ್ಥೆ ಮಯೂರಿ ಮೊಹಿಡೇಕರ್, ಟೊಯೋಟಾ-ದ ಹಿರಿಯ ಉಪಾಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ವೋಲ್ವೊ-ದ ಸುಸ್ಥಿರತೆ ವ್ಯವಹಾರಗಳ ನಿರ್ದೇಶಕ ಸೋಹಂಜೀತ್ ರಾಂಧವಾ, ಗೋದ್ರೇಜ್-ನ ತಯಾರಿಕಾ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಶುತೋμï ಪರ್ಮಾರ್, ಗೋಕಲ್ದಾಸ್ ಎಕ್ಸ್ಪೋರ್ಟ್ಸ್ ನ ಸಿಇಒ ಶಿವರಾಮಕೃಷ್ಣನ್ ಗಣಪತಿ ಮುಂತಾದ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.







