ಲಕ್ಷಾಂತರ ಗಿಡಗಳನ್ನು ನೆಡುತ್ತಿದ್ದೇವೆ, ಅದು ಎಲ್ಲಿ ಹೋಗುತ್ತಿವೆ? : ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಪ್ರಶ್ನೆ

ಬೆಂಗಳೂರು : ಬೆಂಗಳೂರು ನಗರದಲ್ಲಿ ನಾವು ಲಕ್ಷಾಂತರ ಗಿಡಗಳನ್ನು ನೆಡುತ್ತಿದ್ದೇವೆ. ಅದು ಎಲ್ಲಿ ಹೋಗುತ್ತಿವೆ? ಗಿಡ ನೆಡುವುದಕ್ಕೆ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ನೆಟ್ಟ ಗಿಡಗಳೆಲ್ಲ ಎಲ್ಲಿ ಹೋಗುತ್ತಿವೆ ಅನ್ನೋದು ಪ್ರಶ್ನೆ. ಗಿಡ ನೆಡುವ ನೆಪದಲ್ಲಿ ಗುಣಿ ತೋಡುವ ಕಾಸನ್ನು ಕೊಳ್ಳೆ ಹೊಡೆದಿದ್ದೀರಿ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಸಸಿ ನೆಡುವುದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಲಕ್ಷಾಂತರ ಗಿಡ ನೆಟ್ಟರೂ, ಕೆಲವು ತಿಂಗಳ ಬಳಿಕ ನೆಟ್ಟ ಜಾಗದಲ್ಲಿ ಗಿಡಗಳೇ ಇರುವುದಿಲ್ಲ. ಹಾಗಾದರೆ ಗಿಡಗಳೆಲ್ಲ ಎಲ್ಲಿಗೆ ಹೋದವು? ಬೆಂಗಳೂರಲ್ಲಿ ಕನಿಷ್ಠ ಒಂದು ಕಡೆಯಾದರೂ ಗಿಡ ನೆಡಲು ಸರಿಯಾಗಿ ಗುಣಿ ತೋಡಿರುವುದನ್ನು ನನಗೆ ತೋರಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು.
ಅರಣ್ಯೀಕರಣಕ್ಕಾಗಿ ಬೆಂಗಳೂರಿನಲ್ಲಿ ನಾನು ಹುಟ್ಟಿದ್ದಾಗಿನಿಂದಲೂ ಸಸಿ ನೆಡುತ್ತಲೇ ಇದ್ದಾರೆ. ಆದರೂ, ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಮರಗಿಡಗಳು ಕಾಣುತ್ತಿಲ್ಲ. ಬಿಬಿಎಂಪಿ, ಅರಣ್ಯ ಇಲಾಖೆಯಿಂದ 20 ವರ್ಷಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ ಮತ್ತು ಇದಕ್ಕಾಗಿ ಖರ್ಚು ಮಾಡಿರುವ ಹಣ ಎಷ್ಟು? ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.
ಗಿಡನೆಟ್ಟ ಬಗ್ಗೆ ಪ್ರತಿ ವರ್ಷದ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಎಷ್ಟು ಗಿಡಗಳು ಬದುಕುಳಿದಿವೆ ಎಂಬುದನ್ನು ತಿಳಿಸಬೇಕು. ಪ್ರತಿಯೊಂದು ಗಿಡ ನೆಡಲು 3,300 ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಗುಂಡಿ ತೋಡುವುದಕ್ಕಾಗಿ 300 ರೂ. ನಿಗದಿಯಾಗಿದೆ. ಈವರೆಗೂ ತಮ್ಮ ಕ್ಷೇತ್ರದಲ್ಲಿ ಗುಂಡಿ ತೋಡದೇ, ಫುಟ್ಪಾತ್ ಪಕ್ಕ ಮಣ್ಣು ಕೆದಕಿ ಗಿಡ ನೆಟ್ಟಿರುವ ಉದಾಹಣೆಗಳು ಸಾಕಷ್ಟಿವೆ. ಇದರಲ್ಲಿ ನೇರವಾಗಿ ಪ್ರತಿ ಗಿಡ ಲೆಕ್ಕದಲ್ಲಿ 300 ರೂ. ನುಂಗಿರುವ ಸಾಧ್ಯತೆ ಇದೆ. ಇದನ್ನು ಬೇಕಿದ್ದರೆ ಸಾಕ್ಷಿ ಸಮೇತ ಸಾಬೀತು ಪಡಿಸುತ್ತೇನೆ. ನನ್ನ ಕ್ಷೇತ್ರಕ್ಕೆ ಬನ್ನಿ ಎಂದು ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸವಾಲು ಎಸೆದರು.
ಪ್ರಸಕ್ತ ಸಾಲಿನಲ್ಲಿ 64,130 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಭಾಗಿತ್ವದಲ್ಲಿ ಸಸಿ ನೆಟ್ಟು ಅವುಗಳ ಪೋಷಣೆಗೆ ಆದ್ಯತೆ ನೀಡಬೇಕು. ಈ ಸಂಬಂಧ ಪ್ರತಿಯೊಂದು ಪಾಲಿಕೆಯೂ ಸಮಗ್ರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕೃಷ್ಣಬೈರೇಗೌಡ ಹೇಳಿದರು.
ನಗರದಲ್ಲಿ ಸಸಿ ನೆಡುವ ಕಾರ್ಯದಲ್ಲಿ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಅಗತ್ಯವಿರುವ ಸಸಿಗಳ ಕುರಿತು ಮನವಿ ಸಲ್ಲಿಸಿದರೆ, ಅವುಗಳನ್ನು ಪೂರೈಸಿ ನೆಡುವ ವ್ಯವಸ್ಥೆ ಮಾಡಲಾಗುವುದು. ಬಳಿಕ ರಸ್ತೆ ಬದಿ ಹಾಗೂ ಕೆರೆಗಳ ಸುತ್ತಮುತ್ತ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುವುದು. ಇದರ ಮೇಲ್ವಿಚಾರಣೆಗಾಗಿ ಸಹಾಯಕ ಇಂಜಿನಿಯರ್ಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.
‘ಸಹಾಯ’ ತಂತ್ರಾಂಶದ ಮೂಲಕ ದೂರು ಸಲ್ಲಿಸಿ: ಅಪಾಯದ ಸ್ಥಿತಿಯಲ್ಲಿರುವ ಮರಗಳು, ಒಣಗಿದ ಕೊಂಬೆಗಳು ಅಥವಾ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಮರಗಳ ಕುರಿತು ನಾಗರಿಕರು ‘ಸಹಾಯ’ ತಂತ್ರಾಂಶದ ಮೂಲಕ ದೂರು ಸಲ್ಲಿಸಬೇಕು. ದೂರುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು. ಆನ್ಲೈನ್ ಮೂಲಕ ದೂರು ಸಲ್ಲಿಸಿದರೆ ಅವುಗಳ ಪ್ರಗತಿಯನ್ನು ಸುಲಭವಾಗಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಐದು ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೆÇಮ್ಮಲ ಸುನೀಲ್ ಕುಮಾರ್, ಜಿ.ಜಗದೀಶ್, ರಮೇಶ್ ಕೆ.ಎನ್., ಡಾ.ರಾಜೇಂದ್ರ ಕೆ.ವಿ., ವಿಶೇಷ ಆಯುಕ್ತ ವೆಂಕಟಾ ಚಲಪತಿ, ಅರಣ್ಯ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






