ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಈಡಿ ದಾಳಿ; ರಾಜಕೀಯ ಪ್ರೇರಿತ : ಸಚಿವ ರಘುಮೂರ್ತಿ

ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು ನಡೆಸಿರುವ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ವಿಪಕ್ಷಗಳ ಪ್ರಬಲ ನಾಯಕರ ಶಕ್ತಿಯನ್ನು ಕುಂದಿಸಲು ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ರಘುಮೂರ್ತಿ ಆರೋಪಿಸಿದ್ದಾರೆ.
ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಅವರ ಮನೆ ಮೇಲೆ ದಾಳಿಯಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ತಾವೂ ಜಾರಕಿಹೊಳಿ ಮನೆಗೆ ಭೇಟಿ ನೀಡಲು ತೆರಳಿದ್ದೆರಾದರೂ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಸತೀಶ್ ಅವರು ಸದಾ ಆಳವಾದ ಚಿಂತನೆಗಳನ್ನು ಹೊಂದಿರುವ ಗಟ್ಟಿಗರಾಗಿದ್ದು, ಇಂತಹ ಯಾವುದೇ ಒತ್ತಡಗಳಿಗೆ ಅಥವಾ ದಾಳಿಗಳಿಗೆ ಅವರು ಕುಂದುವುದಿಲ್ಲ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಯಾವುದೇ ಒತ್ತಡಕ್ಕೂ ಕುಗ್ಗುವ ವ್ಯಕ್ತಿಯಲ್ಲ. ಪ್ರಸ್ತುತ ನಡೆದಿರುವ ಈಡಿ ದಾಳಿಯ ಸಂಪೂರ್ಣ ಮಾಹಿತಿ ಬಹಿರಂಗವಾದ ಬಳಿಕವೇ ಅದರ ಹಿಂದಿನ ಕಾರಣದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಕೇಂದ್ರ ಸರಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಸಮುದಾಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸತೀಶ್ ಜಾರಕಿಹೊಳಿ ಅವರ ಮೇಲಿನ ಕ್ರಮದ ಹಿಂದಿನ ನಿಖರ ಕಾರಣವೇನು ಎಂಬುದು ತಮಗೆ ತಿಳಿದಿಲ್ಲವಾದರೂ, ರಾಜಕೀಯವಾಗಿ ಅವರನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದೆ ನಾಗೇಂದ್ರ ರಾಜೀನಾಮೆ ಪಡೆದ ಸಂದರ್ಭದಲ್ಲೂ ಇದೇ ರೀತಿ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗಿತ್ತು ಎಂದು ರಘುಮೂರ್ತಿ ದೂರಿದರು.






