ನಮ್ಮ ತೆರಿಗೆ ಪಾವತಿಗೆ ತಕ್ಕಂತೆ ಕೇಂದ್ರ ಸರಕಾರ ಪಾಲು ನೀಡಲಿ : ಸಚಿವ ರಾಯರಡ್ಡಿ

ಬೆಂಗಳೂರು : ಕರ್ನಾಟಕ ಜನತೆ ನೀಡುತ್ತಿರುವ ತೆರಿಗೆ ಸಂಗ್ರಹಕ್ಕೂ, ಕೇಂದ್ರ ಸರಕಾರ ನೀಡುವ ಪಾಲು ಬಹಳ ವ್ಯತ್ಯಾಸ ಇದೆ. ಹೀಗಾಗಿ, ಕೇಂದ್ರ ಸರಕಾರ ನಮ್ಮ ತೆರಿಗೆಗೆ ತಕ್ಕಂತೆ ಪಾಲು ನೀಡಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಉದ್ಯಮಿಗಳಾಗಲು ಪ್ರೊ ತ್ಸಾಹಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಎಫ್ಕೆಸಿಸಿಐ ಜಂಟಿಯಾಗಿ ಆಯೋಜಿಸಿರುವ ‘ಮಂಥನ್-2026' (18ನೆ ಆವೃತ್ತಿ) ಬಿಸಿನೆಸ್ ಪ್ಲಾನ್ ಸ್ಪರ್ಧೆಯ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಮ್ಮ ಪಾಲನ್ನು ಹೆಚ್ಚು ಮಾಡಿದರೆ ಮೂಲಭೂತ ಸೌಕರ್ಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸಲು ಅನುಕೂಲ ಎಂದು ಹೇಳಿದರು.
ನಾನು ಈ ಹಿಂದೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರನಾಗಿ ಕೆಲಸ ಮಾಡಿದ್ದೇನೆ. ಆ ಅನುಭವದಿಂದ ಹೇಳುತ್ತೇನೆ, ಕರ್ನಾಟಕದಲ್ಲಿ ಹಣದ ಕೊರತೆ ಎನ್ನುವುದು ಸುಳ್ಳು. ಆದರೆ, ಕೇಂದ್ರ ಸರಕಾರಿ ಬರುವ ಅನುದಾನದ ಕುರಿತು ವ್ಯಾಪಕ ಚರ್ಚೆ ಆಗಬೇಕು. ವಾಣಿಜ್ಯೊದ್ಯಮಿಗಳು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಕೇಂದ್ರ ಸರಕರ ನಮ್ಮ ಪಾಲನ್ನು ಹೆಚ್ಚು ಮಾಡಿದರೆ ಮೂಲಭೂತ ಸೌಕರ್ಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸಲು ಅನುಕೂಲ ಎಂದು ಅವರು ತಿಳಿಸಿದರು.
ಮುಂದಿನ ಪೀಳಿಗೆಯ ಉದ್ಯಮಿಗಳಾಗುತ್ತಿರುವವರಿಗೆ ಶಕ್ತಿ ತುಂಬುವ ಈ ವೇದಿಕೆಯಲ್ಲಿ ಯುವ ಪ್ರತಿಭೆಗಳ ನವೀನ ಆಲೋಚನೆಗಳನ್ನು ವೀಕ್ಷಿಸಲು ಸಂತೋಷವೆನಿಸುತ್ತದೆ.ಇಲ್ಲಿರುವ ಯುವಕ, ಯುವತಿಯರೇ ನಾಳಿನ ಉದ್ಯಮಿಗಳು ಹಾಗೂ ಉದ್ಯೋಗದಾತರು. ಅವರ ಭವಿಷ್ಯದ ಯೋಜನೆಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಸರಕಾರದ ಆದ್ಯತೆಯಾಗಿದೆ. 18 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿರುವ ಅನ್ವೇಷಣಾ ಸಾಮಥ್ರ್ಯ ಹೆಚ್ಚಿಸಲು, ಅವರಲ್ಲಿ ಈ ಕುರಿತು ಉತ್ಸಾಹ ಮೂಡಿಸುವ ಕೆಲಸ ಮಾಡಿದ್ದೀರಿ. ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಈ ಕಾರ್ಯಕ್ರಮ ನಡೆದಿದೆ ಎನ್ನುವುದು ಸಂತಸದ ವಿಚಾರ ಎಂದು ಅವರು ನುಡಿದರು.
ನಮ್ಮ ದೇಶದಲ್ಲಿಎರಡು ಸಮಸ್ಯೆ ಇದೆ. ಒಂದು ಜನಸಂಖ್ಯೆ, ಮತ್ತೊಂದು ಉದ್ಯೋಗ. ನಮ್ಮಲ್ಲಿ ಯುವಕ, ಯುವತಿಯರ ಸಂಖ್ಯೆ ದೊಡ್ಡದಿದೆ. ಆದ್ದರಿಂದ ಇಂತಹ ಯೋಜನೆಗಳು ಬಹಳ ಮುಖ್ಯ. ಸರಕಾರಗಳೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸಮಾಜವೂಇದರಲ್ಲಿ ತೊಡಗಿಕೊಳ್ಳಬೇಕು. ನಮ್ಮಲ್ಲಿ ಈಗ ಶೇ.70ರಷ್ಟು ಸಾಕ್ಷರತಾ ಪ್ರಮಾಣ ಇದೆ. ಅವರೆಲ್ಲರಿಗೂ ಉದ್ಯೋಗ ನೀಡುವುದು ಸಮಸ್ಯೆ. ಹಾಗಾಗಿ ಹೆಚ್ಚು ಉದ್ಯೋಗದಾತರನ್ನು ಸೃಷ್ಟಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಪ್ರತಿಭಾ ಪಲಾಯನವೂ ಇಂದು ನಮ್ಮನ್ನು ಕಾಡುವ ಇನ್ನೊಂದು ಸಮಸ್ಯೆ. ಹೊರಹೋಗಿ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳುವುದು ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಪ್ರತಿಭಾವಂತರನ್ನು ಉಳಿಸಿಕೊಳ್ಳವುದು ಅನಿವಾರ್ಯತೆ ಇದೆ. ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಕಾಲೇಜು ಶಿಕ್ಷಣ ಆಯುಕ್ತ ಗೋಪಾಲಕೃಷ್ಣ, ಡಾ.ಹರೀಶ್ ಕುಮಾರ್, ಎಫ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.






