ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಆರು ವರ್ಷ ಕಾಲ ಉಚ್ಚಾಟನೆ

ಬೆಂಗಳೂರು : ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಹಾಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಅರಬೈಲ್ ಹೆಬ್ಬಾರ್ ಶಿವರಾಮ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಈ ಸಂಬಂಧ ಆದೇಶ ಹೊರಡಿಸಿದೆ. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕ ಅರಬೈಲ್ ಹೆಬ್ಬಾರ್ ಶಿವರಾಮ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಇಬ್ಬರೂ ಶಾಸಕರು ಹಲವು ದಿನಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರ ಜೊತೆಗೆ ಬಿಜೆಪಿಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದರು. ಆ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.
ಪರಿಷತ್ ಚುನಾವಣೆ ವೇಳೆಯ ಇಬ್ಬರೂ ಶಾಸಕರು ಬಿಜೆಪಿ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಹೀಗಾಗಿ ಇವರ ವಿರುದ್ದ ರಾಜ್ಯ ಬಿಜೆಪಿ, ಹೈಕಮಾಂಡ್ಗೆ ದೂರು ನೀಡಿತ್ತು. ಒಂದು ವರ್ಷದ ಬಳಿಕ ದೂರನ್ನು ಪರಿಗಣಿಸಿರುವ ಹೈಕಮಾಂಡ್ ಇಬ್ಬರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಮುಂದಿನ ಆರು ವರ್ಷಗಳ ಅವಧಿಗೆ ಉಚ್ಚಾಟಿಸಿ ಆದೇಶ ಹೊರಡಿಸಿದೆ.
ಇಬ್ಬರೂ ಶಾಸಕರು ಈ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಸರಕಾರದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರಾಗಿ ಹಾಗೂ ಸೋಮಶೇಖರ್ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ನಂತರದಲ್ಲಿ ಇಬ್ಬರೂ ಶಾಸಕರು ಕಾಂಗ್ರೆಸ್ ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದರು. ಹೀಗಾಗಿ ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ರಾಜ್ಯ ಬಿಜೆಪಿ ವರದಿ ನೀಡಿತ್ತು.
ಸ್ವಾಗತಾರ್ಹ: ‘ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಏನೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ ಎಂಬುದು ಅವರಿಗೂ ಗೊತ್ತಿದೆ. ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಉಚ್ಚಾಟನೆಯನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರಿಬ್ಬರಿಗೂ ಅವಕಾಶ ಸಿಕ್ಕಿತ್ತು. ಆದರೆ, ವಿಪಕ್ಷದಲ್ಲಿ ಕೂರಬೇಕಾದಾಗ ಅವರಿಗೆ ಕಷ್ಟ ಆಯಿತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ನಾನೀಗ ಫ್ರೀ ಬರ್ಡ್: ‘ಅತ್ಯಾಚಾರ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡುತ್ತಾರೆ. ಪಕ್ಷದಿಂದ ಈ ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು. ನನಗೆ ಶೇ.1ರಷ್ಟೂ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿಯಿದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯವಿಲ್ಲ. ಉಚ್ಚಾಟನೆ ಯಾಕೆ ಮಾಡಿದ್ದಿರೆಂದು ಕೇಳುವುದಿಲ್ಲ. ನಾನೀಗ ಸ್ವತಂತ್ರ ಹಕ್ಕಿ(ಫ್ರೀ ಬರ್ಡ್) ಇನ್ನು ಫ್ರೀ ಆಗಿ ಓಡಾಡುತ್ತೇನೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ’
-ಎಸ್.ಟಿ.ಸೋಮಶೇಖರ್ ಯಶವಂತಪುರ ಕ್ಷೇತ್ರದ ಶಾಸಕ
ಉಳಿದವರ ಕತೆ ಏನು: ‘ನಮ್ಮನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದು ಒಳ್ಳೆಯದೇ ಆಯಿತು. ನಾವೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರಲಿಲ್ಲ. ಪಕ್ಷದಲ್ಲಿ ನಮ್ಮನ್ನು ಸಂಪೂರ್ಣ ಕಡೆಗಣಿಸಿತ್ತು. ಕ್ಷೇತ್ರದ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾಂಗ್ರೆಸ್ಗೆ ಕೆಲವು ವಿಷಯಗಳಲ್ಲಿ ಬೆಂಬಲ ಸೂಚಿಸಿದ್ದೆವು. ನಮ್ಮನ್ನು ಪಕ್ಷ ವಿರೋಧಿ ಚಟುವಟಿಕೆಯಿಂದ ಉಚ್ಚಾಟಿಸುವುದಾದರೆ ಉಳಿದವರ ಕಥೆ ಏನು?’
-ಶಿವರಾಮ್ ಹೆಬ್ಬಾಳ್, ಯಲ್ಲಾಪುರ ಕ್ಷೇತ್ರದ ಶಾಸಕ







