ಗುಂಪು ಹಿಂಸಾಚಾರ: ಎಬಿವಿಪಿ ದುಷ್ಕರ್ಮಿಗಳನ್ನು ರಕ್ಷಿಸಿದ ಅಝೀಂ ಪ್ರೇಮ್ಜಿ ವಿವಿ

ಬೆಂಗಳೂರು : ಫೆಬ್ರವರಿಯಲ್ಲಿ ನಡೆದ ಗುಂಪು ಹಿಂಸಾಚಾರಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಅಝೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯವು ವಿಫಲವಾಗಿದ್ದು
ಬದಲಾಗಿ, ತನ್ನದೇ ವಿದ್ಯಾರ್ಥಿಗಳನ್ನು ದಂಡನೆಗೆ ಗುರಿಯಾಗಿಸಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಲಾಯಿತು.
ಶುಕ್ರವಾರ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್-ಕರ್ನಾಟಕ), ಬಹುತ್ವ ಕರ್ನಾಟಕ, ನಾವೆದ್ದು ನಿಲ್ಲದಿದ್ದರೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್ಎಫ್), ಕಲೆಕ್ಟಿವ್, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ ಕರ್ನಾಟಕ (ಎಐಎಲ್ಎಜೆ-ಕರ್ನಾಟಕ) ಮತ್ತು ಆಲ್ ಇಂಡಿಯಾ ಫೋರಮ್ ಫಾರ್ ರೈಟ್ ಟು ಎಜುಕೇಶನ್ (ಎಐಎಫ್ಆರ್ಟಿಇ) ಸಂಘಟನೆಗಳು ಈ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿವೆ.
ವರದಿ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ನಾವೆದ್ದು ನಿಲ್ಲದಿದ್ದರೆ ಸಂಘಟನೆ’ಯ ಹೋರಾಟಗಾರ್ತಿ ಮಧುಭೂಷಣ್, ಎಬಿವಿಪಿ ಗುಂಪು ಹಿಂಸಾಚಾರಕ್ಕೆ ಅಝೀಂ ಪ್ರೇಮ್ಜಿ ವಿಶ್ವ ವಿದ್ಯಾನಿಲಯದ ಪ್ರತಿಕ್ರಿಯೆಯು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವ ತನ್ನದೇ ಭರವಸೆಯನ್ನು ಉಲ್ಲಂಘಿಸಿದೆ ಎಂದರು.
2026ರ ಫೆ.24ರಂದು ಕುನಾನ್-ಪೋಶ್ಲೋರಾ ದೌರ್ಜನ್ಯ ಮತ್ತು ಭಾರತೀಯ ಸೇನೆಯ ಸಾಮೂಹಿಕ ಅತ್ಯಾಚಾರದ ಕುರಿತು ಸ್ಪಾರ್ಕ್-ಎಪಿಯು ಎಂಬ ವಿದ್ಯಾರ್ಥಿಗಳ ಕೂಟ ರೀಡಿಂಗ್ ಸರ್ಕಲ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಬಿವಿಪಿಯ 20 ಜನರ ಗುಂಪೊಂದು ಅಝೀಂ ಪ್ರೇಮ್ಜಿ ವಿವಿಯ ಕ್ಯಾಂಪಸ್ಗೆ ನುಗ್ಗಿ, ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಕಿರುಕುಳ ನೀಡಿತ್ತು. ಈ ಘಟನೆಯ ನಂತರ, ರಾಜ್ಯಾದ್ಯಂತ ನಾಗರಿಕ ಸಮಾಜ ಸಂಘಟನೆಗಳ ಸದಸ್ಯರು ವಿವಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು ಎಂದು ಮಧುಭೂಷಣ್ ತಿಳಿಸಿದರು.
ಎಬಿವಿಪಿ ನಡೆಸಿದ ಹಿಂಸಾಚಾರ ಖಂಡಿಸಿ, ವಿವಿ ವಿದ್ಯಾರ್ಥಿಗಳೊಂದಿಗೆ ಬೆಂಬಲ ವ್ಯಕ್ತಪಡಿಸಲು, ಘಟನೆಯ ಬಗ್ಗೆ ಮತ್ತು ವಿವಿಯ ಆಡಳಿತದ ಪ್ರತಿಕ್ರಿಯೆಯ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿವಿಧ ನಾಗರಿಕ ಸಮಾಜ ಸಂಘಟನೆಗಳ ಕಾರ್ಯಕರ್ತರ ತಂಡವು ಮಾರ್ಚ್ನಲ್ಲಿ ಕ್ಯಾಂಪಸ್ಗೆ ಭೇಟಿ ನೀಡಿತು. ತಂಡವು ವಿವಿಯ ಆಡಳಿತದೊಂದಿಗೆ ಮಾತನಾಡಲು ಪ್ರಯತ್ನಿಸಿತು, ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದಾಗ್ಯೂ, ತಂಡವು ಸರ್ಜಾಪುರ ಪೊಲೀಸರು, ವಿದ್ಯಾರ್ಥಿಗಳು ಮತ್ತು ಕೆಲವು ಅಧ್ಯಾಪಕರ ಕಡೆಯಿಂದ ಬಂದ ಉಲ್ಲೇಖಗಳು ಮತ್ತು ಹಲವಾರು ಸಂಭಾಷಣೆಗಳನ್ನು ಒಟ್ಟುಗೂಡಿಸಿ ಈ ವರದಿಯನ್ನು ತಯಾರಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ(ಪಿಯುಸಿಎಲ್-ಕರ್ನಾಟಕ)ದ ಅಧ್ಯಕ್ಷ ಅರವಿಂದ್ ನರೈನ್, ಬಹುತ್ವ ಕರ್ನಾಟಕ’ ಸಂಘಟನೆಯ ಮೋಹನ್ ರಾವ್, ವಿಜ್ಞಾನಿ ಮತ್ತು ಶಿಕ್ಷಣ ತಜ್ಞ ಸುವ್ರತ್ ರಾಜು, ಎಐಎಲ್ಎಜೆ-ಕರ್ನಾಟಕದ ಮಧುಲಿಕಾ ಟಿ. ಮತ್ತು ಸ್ಟೂಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ(ಎಸ್ಎಫ್ಪಿಡಿ)ಯ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸತ್ಯಶೋಧನಾ ವರದಿಯ ಮುಖ್ಯಾಂಶಗಳು
► ಸ್ಪಾರ್ಕ್-ಎಪಿಯು ವಿರುದ್ಧದ ಎಲ್ಲ ಆರೋಪಗಳನ್ನು ವಿಶ್ವವಿದ್ಯಾನಿಲಯವು ತಕ್ಷಣವೇ ಹಿಂಪಡೆಯಬೇಕು.
► ತಕ್ಷಣದಿಂದ ಜಾರಿಗೆ ಬರುವಂತೆ, ವಿವಿಯು ವಿದ್ಯಾರ್ಥಿಯ ಅಮಾನತನ್ನು ರದ್ದುಗೊಳಿಸಬೇಕು.
► ವಿವಿಯು ವಿದ್ಯಾರ್ಥಿ ಸಂಘದೊಂದಿಗೆ ತೊಡಗಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಎಲ್ಲ ವಿದ್ಯಾರ್ಥಿಗಳ ಕಳವಳಗಳನ್ನು ಪರಿಹರಿಸಬೇಕು ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು.
► ಪೊಲೀಸರು ತನಿಖೆಯ ವರದಿ ವಿಳಂಬ ಮಾಡದೆ ನೀಡಬೇಕು ಮತ್ತು ಸ್ಪಾರ್ಕ್-ಎಪಿಯು ವಿರುದ್ಧದ ಪ್ರಕರಣವನ್ನು ರದ್ದುಮಾಡಬೇಕು
.






