ಮುಂದುವರೆದ ಪ್ರತಿಪಕ್ಷಗಳ ಗದ್ದಲ: ಉಭಯ ಸದನ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು : ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರವೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ನಿಂದ ಪ್ರತಿಭಟನೆ, ಗದ್ದಲ ಮುಂದುವರೆದಿದ್ದು, ಇದರ ನಡುವೆಯೇ ಪ್ರಶ್ನೋತ್ತರ, ವಿಧೇಯಕಗಳ ಅಂಗೀಕಾರ ಪ್ರಕ್ರಿಯೆ ಪೂರ್ಣಗೊಳಿಸಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಶುಕ್ರವಾರ 12:30ರ ಸುಮಾರಿಗೆ ವಿಧಾನಸಭೆ ಕಲಾಪ ಆರಂಭಿಸಿದ ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಕಾರ್ಯ-ಕಲಾಪ ಕೈಗೆತ್ತಿಕೊಂಡರು. ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದರು. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಅಲ್ಲಿಯ ವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪುನರುಚ್ಚಿಸಿದರು.
ಇನ್ನೊಂದೆಡೆ, ಬಿಜೆಪಿ ಸದಸ್ಯರು, ‘ದಲಿತರ ಹಣ ಎಲ್ಲಿ ಹೋಯಿತು.. ರಾಹುಲ್ಗಾಂಧಿ ಮನೆಗೆ ಹೋಯಿತು’ ಎಂದು ಘೋಷಣೆ ಕೂಗಿದರೆ, ಇತ್ತ ‘ಅಯೋಧ್ಯೆ ರಾಮಮಂದಿರ ಹಣ ಆರೆಸ್ಸೆಸ್, ಬಿಜೆಪಿ ಕಚೇರಿಗೆ ಹೋಯಿತು’ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತಿಯಾಗಿ ಘೋಷಣೆ ಮೊಳಗಿಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಇದರ ನಡುವೆಯೇ ಸಚಿವರಾದ ಕೃಷ್ಣಭೈರೇಗೌಡ, ಎಚ್.ಸಿ.ಬಾಲಕೃಷ್ಣ ಪರ್ಯಾಲೋಚಿಸಬೇಕೆಂದು ಕೋರಿದ ಮೂರು ವಿಧೇಯಕಗಳನ್ನು ಯಾವುದೇ ಚರ್ಚೆಗಳು ಇಲ್ಲದೇ ಅಂಗೀಕಾರ ಮಾಡಲಾಯಿತು. ಅನಂತರ, ಉಪಸಭಾಧ್ಯಕ್ಷ ಮಂಕಾಳ್ ವೈದ್ಯ ಅವರು ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟ 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಿದರು. ಆ ಬಳಿಕ ಕಲಾಪವನ್ನು ಸೋಮವಾರ(ಆ.24) ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.






