ಬೆಂಗಳೂರು | ಯುವಕನ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮದ್ಯಪಾನ ಮಾಡುವಾಗ ಉಂಟಾದ ಗಲಾಟೆಯಲ್ಲಿ ಯುವಕನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆಗೈದಿರುವ ಘಟನೆ ಇಲ್ಲಿನ ಮಡಿವಾಳದ ಕೆಎಚ್ಬಿ ರಸ್ತೆಯಲ್ಲಿ ವರದಿಯಾಗಿದೆ.
ಮೇ9ರ ರಾತ್ರಿ ಘಟನೆ ನಡೆದಿದ್ದು, ಮಾರ್ಟಿನ್ ಸೈಮನ್(26) ಎಂಬಾತ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಕೃತ್ಯ ನಡೆಸಿದ ರಾಜ(28) ಎಂಬುವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿರುವುದಾಗಿ ಮಡಿವಾಳ ಠಾಣಾ ಪೊಲೀಸರು ತಿಳಿಸಿದ್ದಾರೆ.
ಮಡಿವಾಳದ ಕೆಎಚ್ಬಿ ರಸ್ತೆಯ ಮನೆಯೊಂದರ ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಬಾಡಿಗೆಗಿದ್ದ ಈ ಇಬ್ಬರೂ ಮೇ 9ರಂದು ರಾತ್ರಿ ಮೊದಲನೇ ಮಹಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಆಕ್ರೋಶಗೊಂಡ ರಾಜ ಎಂಬಾತ ಮಾರ್ಟಿನ್ ಸೈಮನ್ಗೆ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಡಿವಾಳ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.