ಚಿನ್ನದ ಪದಕಗಳ ದುರ್ಬಳಕೆ: ನಾಲ್ವರು ಸರಕಾರಿ ಅಧಿಕಾರಿಗಳ ಖುಲಾಸೆ
ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಅರ್ಹರಿಗೆ ನೀಡುವ ಸಲುವಾಗಿ ತರಿಸಲಾಗಿದ್ದ 25 ಚಿನ್ನದ ಪದಕಗಳ ಪೈಕಿ 6 ಪದಕಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಾಲ್ವರು ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಬೆಂಗಳೂರಿನ ವಿಶೇಷ ಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಕನ್ನಡ ಸಂಸ್ಕತಿ ಇಲಾಖೆಯ ಬಿ.ಎಸ್.ಶಿವಪ್ರಕಾಶ್(ಪ್ರಥಮ ದರ್ಜೆ ಸಹಾಯಕ), ನಿವೃತ್ತ ಆಯುಕ್ತ ಎಂ.ಪಿ.ಬಳಿಗಾರ್, ಅಂದಿನ ಜಂಟಿ ನಿರ್ದೇಶಕ ಕೆ.ಟಿ.ಚಿಕ್ಕಣ್ಣ ಮತ್ತು ರಂಗಾಯಣದ ಹಾಲಿ ನಿರ್ದೇಶಕ ಎಸ್.ಐ.ಭಾವಿಕಟ್ಟಿ ಅವರನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಖುಲಾಸೆಗೊಳಿಸಿ ಆದೇಶಿಸಿದೆ.
ಆರೋಪಿಗಳ ವಿರುದ್ಧದ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ಗಳಾದ 13(1)(ಸಿ), 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ರದ್ದುಪಡಿಸಲಾಗಿದೆ. ತನಿಖೆಗಾಗಿ ಪಡೆಯಲಾಗಿದ್ದ 19 ಚಿನ್ನದ ಪದಕ ಹಾಗೂ 188 ಕಡತಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮರಳಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.
ತನಿಖಾಧಿಕಾರಿಯು ಸ್ವೇಚ್ಛೆಯಿಂದ ನಡೆದುಕೊಂಡಿದ್ದು, ನಿಯಮಗಳಿಗೆ ವಿರುದ್ಧವಾಗಿ ವಾಸ್ತವಿಕ ಅಂಶಗಳನ್ನು ಪರಿಗಣಿಸದೇ ಆಧಾರರಹಿತ ಆರೋಪಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಿಂದ 188 ಕಡತ ಜಪ್ತಿ ಮಾಡುವ ಸಂಕಟವನ್ನು ತನಿಖಾಧಿಕಾರಿಯು ಅನಗತ್ಯವಾಗಿ ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.
ಆಯುಕ್ತರ ಕಚೇರಿಯಲ್ಲಿ 25 ಚಿನ್ನದ ಪದಕಗಳಿದ್ದು, ಆರೋಪಿಗಳು ಆರು ಚಿನ್ನದ ಪದಕಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ತಮ್ಮ ಆರೋಪವನ್ನು ಸಮರ್ಥಿಸಿಲ್ಲ. ತನಿಖಾಧಿಕಾರಿಯ ಈ ರೀತಿಯ ನಡೆ ಮತ್ತು ಕಾನೂನುಬಾಹಿರ ಕೃತ್ಯದಿಂದ ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಹೋಗಲಿದೆ. ಇದರಿಂದ ಮುಗ್ಧರು ಸಂತ್ರಸ್ತರಾಗುವುದಲ್ಲದೇ ಸಕಾರಣವಿಲ್ಲದೇ ತಮ್ಮ ಅಮೂಲ್ಯವಾದ ಸಮಯವನ್ನು ಅವರು ನ್ಯಾಯಾಲಯದಲ್ಲಿ ಕಳೆಯುವಂತೆ ಮಾಡಲಾಗುತ್ತಿದೆ. ಇದು ನಿಜಕ್ಕೂ ಉತ್ತಮ ಸಂದೇಶವಲ್ಲ. ದುರದೃಷ್ಟಕರ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳಿಗೆ 25 ಚಿನ್ನದ ಪದಕಗಳ ಹೊಣೆಗಾರಿಕೆ ನೀಡಲಾಗಿತ್ತು. ತಮ್ಮ ಅಧಿಕಾರವಧಿಯಲ್ಲಿ ಸ್ಥಾನ ದುರ್ಬಳಕೆ ಮಾಡಿಕೊಂಡು 3,12,000 ರೂ.ಮೌಲ್ಯದ 6 ಪದಕಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿತ್ತು