ವಾಟ್ಸಾಪ್ ಗೀಳನ್ನು ಬಿಟ್ಟು ಪುಸ್ತಕ ಓದುವ ಅಭ್ಯಾಸ ಮಾಡಿ: ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ವಾಟ್ಸಾಪ್ ಗೀಳನ್ನು ಬಿಟ್ಟು ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಗ್ರಂಥಾಲಯದ ಪ್ರೀತಿ, ಉತ್ಸಾಹವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಗ್ರಂಥಾಲಯಗಳು ಡಿಜಿಟಲಿಕರಣಕ್ಕೆ ಹೊರಳಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ್ ಬಿಳಿಮಲೆ ಕರೆ ನೀಡಿದ್ದಾರೆ.
ಶನಿವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂಡಿಯನ್ ಲೈಬ್ರರಿ ಕಾಂಗ್ರೆಸ್ ಸಂಘಟನಾ ಸಮಿತಿ ವತಿಯಿಂದ ಆಯೋಜಿಸಿದ್ದ ಎರಡನೆ ಭಾರತೀಯ ಗ್ರಂಥಾಲಯ ಅಧಿವೇಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವೀಗ ವಾಟ್ಸಾಪ್ ವಿಶ್ವ ವಿದ್ಯಾಲಯದ ಅಡಿಗೆ ತಲುಪಿದ್ದೇವೆ. ಅಲ್ಲಿ ವಿಮರ್ಶೆಯಾಗಲಿ, ಚರ್ಚೆಗಳಾಗಲಿ ಇಲ್ಲ. ಈಗ ಲೈಬ್ರರಿಯನ್ನೂ ವಾಟ್ಸಾಪ್ ತಿಂದಿದೆ. ಶಿಕ್ಷಕರು, ಉಪನ್ಯಾಸಕರು ಇದಕ್ಕೆ ಸಿಕ್ಕಿಬಿದ್ದಿರುವುದು ಬೇಸರದ ಸಂಗತಿ. ಜಾಗತಿಕರಣ ಎಂದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋಗಿ ಕಲಿಯುವುದಲ್ಲ. ಅಲ್ಲಿನ ಮಕ್ಕಳು ಶಿಕ್ಷಣಕ್ಕೆ ಇಲ್ಲಿಗೆ ಬರುವುದು. ಇದಕ್ಕಾಗಿ ನಾವು ಜ್ಞಾನವನ್ನು ವೃದ್ಧಿಸಿಕೊಳ್ಳುವುದು ಅಗತ್ಯವಿದೆ. ಇದಕ್ಕೆ ನಾವು ಗ್ರಂಥಾಲಯಕ್ಕೆ ಹೊಸ ರೂಪ ಕೊಡಬೇಕಿದೆ ಎಂದು ಅವರು ಸಲಹೆ ನೀಡಿದರು.
ಡಿಜಿಟಲ್ ಲೈಬ್ರರಿ ಮತ್ತು ಎಲ್ಲ ಮಾಹಿತಿಗಳನ್ನು ಭಾಷಾಂತರ ಮಾಡುವ ಅಗತ್ಯವಿದೆ. ಎಲ್ಲಿಯಾದರೂ ಎಲ್ಲರಿಗೂ ಪುಸ್ತಕ ಸಿಗುವಂತಾಗಬೇಕು. ಹಾಗೆಯೇ ಕರ್ನಾಟಕದ ಜಾನಪದ ಕಲೆಗಳನ್ನು ನಾವು ಡಿಜಿಟಲಿಕರಣ ಮಾಡಬೇಕು. ಆಗ ಎಲ್ಲವು ಒಂದೆಡೆ ಸಂಗ್ರಹವಾಗುವ ಜೊತೆಗೆ ಎಲ್ಲಿಂದ ಬೇಕಾದರೂ ಅದನ್ನು ನಾವು ಬಳಸಿಕೊಳ್ಳಬಹುದು. ಇದಕ್ಕಾಗಿ ನಾವು ಕಪಾಟಿನ ಪುಸ್ತಕ ಸಂಗ್ರಹದ ಹಾಗೆ ಡಿಜಿಟಲ್ ಲೈಬ್ರರಿಗೂ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು.
ಮನಮೋಹನಸಿಂಗ್ ಅವರ ಕಾಲದಲ್ಲಿ ನಾವು ಜಾಗತಿಕರಣಕ್ಕೆ ತೆರೆದುಕೊಂಡೆವು. ಈಗ ನಾವು ನಮ್ಮ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯ ಇದೆ. ಕುವೆಂಪು ಅವರ ದೃಷ್ಟಿಕೋನವನ್ನು ಜಾಗತಿಕತೆ ಅಡಿಯಲ್ಲಿ ನೋಡಬೇಕಾಗಿದೆ. 1960-70ರಲ್ಲಿ ಶಿಕ್ಷಣ ಪಡೆಯುವಾಗ ತಪ್ಪು ಮಾಡಿದರೆ ಪುಸ್ತಕವನ್ನು ಓದಿ ಅದರ ಬಗ್ಗೆ ಬರೆದುಕೊಂಡು ಬರುವ ಶಿಕ್ಷೆ ನೀಡುತ್ತಿದ್ದರು. ಇದು ನಮ್ಮ ಓದಿಗೆ ದಾರಿ ಮಾಡಿಕೊಟ್ಟಿತು ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಮಾತನಾಡಿ, ಆಡಳಿತಗಾರರಿಂದ ಸಂವಿಧಾನದ ಪ್ರಸ್ತಾವನೆ ಮತ್ತು ಜಾತ್ಯತೀತತೆಗೆ ದಕ್ಕೆ ಉಂಟಾಗಿತ್ತು. ಲೈಬ್ರರಿ ಕಾಂಗ್ರೆಸ್ ಇದರ ಬಗ್ಗೆ ದನಿಯಾಗಿತ್ತು. ಹೀಗಾಗಿ ನಾವು ಗ್ರಂಥಾಲಯಗಳ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ. ಮುಂದಿನ ಮೂರನೇ ಲೈಬ್ರರಿ ಕಾಂಗ್ರೆಸ್ ತೆಲಂಗಾಣದಲ್ಲಿ ನಡೆಯಲಿದೆ ಎಂದರು.
ಡಾ.ಸತೀಶ ಹೊಸಮನಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 447 ಡಿಜಿಟಲ್ ಗ್ರಂಥಾಲಯಗಳನ್ನು ಪ್ರಾರಂಭ ಮಾಡಲಾಗಿದೆ. 3.79. ಕೋಟಿ ಸದಸ್ಯತ್ವವನ್ನು ಅದು ಹೊಂದಿದೆ. ಆ ಮೂಲಕ ಗ್ರಂಥಾಲಯವನ್ನು ದೇಶದ ಹಳ್ಳಿಹಳ್ಳಿಗೂ ತಲುಪುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತೆಲಂಗಾಣದ ರಾಜ್ಯಸಭಾ ಸದಸ್ಯರಾದ ಎವಿಎನ್ ರಾಜು, ಡಾ.ಎಲ್.ಹನುಮಂತಯ್ಯ, ಡಾ.ರಾಜೇಂದ್ರ ಕುಮಾರ್, ಉಪನ್ಯಾಸಕ ಪ್ರೊ.ಎಲ್.ಎನ್. ಮುಕುಂದರಾಜ್, ಈ.ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







