ಶಿಕ್ಷಕರಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಚ್.ಸಿ ಮಹದೇವಪ್ಪ
ಸಮಾಜ ಕಲ್ಯಾಣ ಇಲಾಖೆಯ ಕಿರುಚಿತ್ರ ; ʼಅನ್ಯಾಯಗಳನ್ನು ಪ್ರಶ್ನೆ ಮಾಡಬೇಕುʼ ಎಂದು ಕರೆ ನೀಡಿದ ಸಚಿವ
ಬೆಂಗಳೂರು : ʼಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾʼ ಎಂಬ ಘೋಷವಾಕ್ಯವನ್ನು ಬದಲಾಯಿಸಿ ʼಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ ಅಂತ ಕೆಲವು ವಸತಿ ಶಾಲೆಗಳಲ್ಲಿ ಬರೆಸಲಾಗಿತ್ತು. ಈ ವಿಚಾರ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೆ ಸಚಿವ ಎಚ್.ಸಿ ಮಹದೇವಪ್ಪ ಅವರು ʼಅನ್ಯಾಯವನ್ನು ಪ್ರಶ್ನೆ ಮಾಡಬೇಕುʼ ಎಂಬ ಅರ್ಥದ ಕಿರುಚಿತ್ರದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಶಿಕ್ಷಕರಾಗಿ ಅಭಿನಯಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದರೂ ವಿದ್ಯಾರ್ಥಿಗಳು ಅದನ್ನು ಪ್ರಶ್ನೆ ಮಾಡಬೇಕು ಎಂಬ ಅರ್ಥದ ಕಿರು ಚಿತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಜೀವನದಲ್ಲಿ ಅನ್ಯಾಯವನ್ನು ಪ್ರಶ್ನೆ ಮಾಡಬೇಕು. ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸಬೇಕು. ಅನ್ಯಾಯವಾದವರ ಪರವಾಗಿ ನಿಲ್ಲಬೇಕು. ಆಗ ನಮ್ಮ ಬದುಕಿಗೊಂದು ಅರ್ಥಬರಲಿದೆ. ಇದನ್ನೇ ನಮ್ಮ ದೇಶದ ಸಂವಿಧಾನ ಹೇಳಿದ್ದು ಎಂದು ವಿದ್ಯಾರ್ಥಿಗಳಿಗೆ ಸಚಿವ ಮಹದೇವಪ್ಪ ಪಾಠ ಮಾಡಿದ್ದಾರೆ.