ಯತ್ನಾಳ್ ಹೇಳಿಕೆ ಸಹಿಸಲು ಸಾಧ್ಯವಿಲ್ಲ: ವೀರಶೈವ ಮಹಾಸಭಾ
ಬೆಂಗಳೂರು: ‘ಸಮುದಾಯದ ನಾಯಕರಿಂದಲೇ ಲಿಂಗಾಯತರಿಗೆ ಅನ್ಯಾಯ’ ಎಂಬ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಖಂಡಿಸುತ್ತದೆ. ಅಲ್ಲದೆ, ಯತ್ನಾಳ್ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.
ಗುರುವಾರ ಪ್ರಕಟಣೆ ನೀಡಿರುವ ಮಹಾಸಭಾ, ಮಹಾಸಭೆಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಕಾರ್ಯದರ್ಶಿ ಈಶ್ವರ ಖಂಡ್ರೆ, ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರುಗಳನ್ನು ವಿನಃ ಕಾರಣ ಟೀಕಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜದ ಹಿತದೃಷ್ಟಿಯಿಂದ ಸಹಿಸಿಕೊಂಡಿದ್ದೇವೆ ಎಂದು ಯತ್ನಾಳ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಸಮಾಜಕ್ಕೆ ಕಿಂಚಿತ್ತು ಸೇವೆಯನ್ನು ಸಲ್ಲಿಸದೆ ಬರೀ ಹೇಳಿಕೆಗಳನ್ನು ನೀಡುವ ಮೂಲಕ ನಾಯಕನಾಗಿ ಬೆಳೆಯಬಹುದೆಂಬ ಭ್ರಮೆಯಲ್ಲಿರುವ ಯತ್ನಾಳ್, ಸಮಾಜದ ಇತಿ-ಮಿತಿಗಳ ಬಗ್ಗೆಯಾಗಲಿ, ಇತಿಹಾಸದ ಅರಿವಾಗಲೀ ಇಲ್ಲದಿರುವುದು ಹಾಗೂ ಇವರು ನಮ್ಮ ಸಮಾಜದ ಜನಪ್ರತಿನಿಧಿ ಆಗಿರುವುದು ವಿಷಾದದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದೆ.
ಬಹಿರಂಗ ಹೇಳಿಕೆಗಳನ್ನು ನೀಡುವುದರ ಮೂಲಕ ಸಮಾಜದ ಒಗ್ಗಟ್ಟನ್ನು ಮುರಿಯುವ ಪ್ರಯತ್ನಕ್ಕೆ ಕೈ ಹಾಕುವುದನ್ನು ಸಹಿಸುವುದಿಲ್ಲ. ಯತ್ನಾಳ್ ಚರಿತ್ರೆಯ ಭಾಗವಾಗಬೇಕೇ? ಬೇಡವೇ? ಎಂಬುದನ್ನು ತೀರ್ಮಾನಿಸಲಿ ಎಂದು ಮಹಾಸಭಾ ತಿಳಿಸಿದೆ.