ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು : ಡಾ. ಏಕ್ರೂಪ್ ಕೌರ್
ಬೆಂಗಳೂರು: ವ್ಯಾಪಾರ ಹಾಗೂ ಕೌಶಲ್ಯ ಕೇಂದ್ರಿತ ಉದ್ದಿಮೆ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಏಕ್ರೂಪ್ ಕೌರ್ ಅವರು ತಿಳಿಸಿದರು.
ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ ಸಹಯೋಗದಿಂದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಮಾರ್ಚ್ 15 ರಿಂದ 17 ರವರೆಗೆ ಹಮ್ಮಿಕೊಳ್ಳಲಾದ ಸ್ವಾವಲಂಬನ್ ಮೇಳ- 2024 ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಡ್ಬಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ರಮಣ್ ಮಾತನಾಡಿ, ಪ್ರಾರಂಭದಿಂದ ದೊಡ್ಡ ಮಟ್ಟಕ್ಕೆ ತಲುಪುವವರೆಗೂ ಮಹಿಳಾ ಉದ್ದಿಮೆದಾರರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರು ಪ್ರಾರಂಭಿಸುವ ಸ್ಟಾರ್ಟ್ ಅಪ್ಗಳಿಗೆ ಸಾಲದ ಸೌಲಭ್ಯವನ್ನು ಬ್ಯಾಂಕುಗಳು ನೀಡುತ್ತಿದೆ ಎಂದರು.
ಸ್ವಾವಲಂಬನ್ ಮೇಳವು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಮಾರ್ಚ್ 15 ರಿಂದ 17 ರವರೆಗೆ ಬೆಳಿಗ್ಗೆ 11 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಿಡ್ಬಿಯ ಮುಖ್ಯ ಜನರಲ್ ಮ್ಯಾನೇಜರ್ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ಸತ್ಯಕಿ ರಸ್ತೋಗಿ, ಸಿಡ್ಬಿಯ ಡಿಜಿಎಂ ಉಲಗಿಯನ್, ಅವೇಕ್ ಅಧ್ಯಕ್ಷರಾದ ಶ್ರೀಮತಿ ಆಶಾ ಎನ್. ಆರ್. ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.