ಪ್ರಧಾನಿಯ ಟ್ವೀಟ್ ಅನ್ನು ರಿಟ್ವೀಟ್ ಮಾಡುವಂತೆ ಚಲನಚಿತ್ರ ನಟರಿಗೆ ಒತ್ತಡ ಆರೋಪ ; ಕೇಂದ್ರ ಸರಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು: ಕೇಂದ್ರ ಸರಕಾರ ಚಲನಚಿತ್ರ ನಟರಿಗೆ ಪ್ರಧಾನಮಂತ್ರಿಗಳ ಟ್ವೀಟ್ ಅನ್ನು ರಿಟ್ವೀಟ್ ಮಾಡುವಂತೆ ಒತ್ತಡ ಹೇರಿ ಪರೋಕ್ಷವಾಗಿ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ವಕ್ತಾರ ಸೂರ್ಯ ಮುಕುಂದರಾಜ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿಸುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ಇನ್ ಫ್ಲುಯನ್ಸರ್ ಗಳಿಗೆ ಕೋಟ್ಯಾಂತರ ರೂಪಾಯಿಯ ಸರಕಾರದ ಹಣ ನೀಡುತ್ತಿದೆ ಎಂದಿದ್ದಾರೆ.
ಫೆ.27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರಿಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿರುತ್ತಾರೆ. ಈ ಪೋಸ್ಟ್ ಅನ್ನು ದೇಶದ ವಿವಿಧ ರಾಜ್ಯಗಳಲ್ಲಿ ಸಿನಿಮಾರಂಗದಲ್ಲಿ ಖ್ಯಾತರಾಗಿರುವ ನಟ ನಟಿಯರಿಗೆ ರಿಟ್ವೀಟ್ ಮಾಡಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಸೆನ್ಸಾರ್ ಬೋರ್ಡ್ ಸದಸ್ಯರ ಮೂಲಕ ಒತ್ತಡ ತಂದು ರೀಪೋಸ್ಟ್ ಮಾಡಿಸಿರುತ್ತಾರೆ ಎಂದು ಸೂರ್ಯ ಮುಕುಂದರಾಜ್ ದೂರಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪ್ರಧಾನ ಮಂತ್ರಿಗಳ ಕಚೇರಿ ಅಥವಾ ಅವರ ಸಚಿವಾಲಯದ ಯಾವುದೇ ಅಧಿಕಾರಿಗಳು ಚುನಾವಣಾ ಪ್ರಚಾರದ ಭಾಗವಾಗಿ ಪರೋಕ್ಷವಾಗಿ ಇಂತಹ ಟ್ವೀಟ್ ಗಳನ್ನು ಮಾಡಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗವು ನಟ ನಟಿಯರಿಗೆ ಪ್ರಭಾವ ಬೀರುತ್ತಿರುವ ಅಧಿಕಾರಿಗಳ ವಿರುದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇನ್ ಫ್ಲುಯನ್ಸರ್ ಗಳಿಗೆ ನೀಡಲಾಗಿರುವ ಹಣದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.