ಬಹಿರಂಗ ಚರ್ಚೆಗೆ ಬಾರದೆ ಪಲಾಯನ ಮಾಡಿದ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಂವಿಧಾನಿಕ ವ್ಯವಸ್ಥೆಗೆ ಕಳಂಕ : ರಮೇಶ್ಬಾಬು
ಬೆಂಗಳೂರು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕಾಂಗ್ರೆಸ್ನ್ನು ‘ಫ್ರಿನ್ಜ್ ಪಾರ್ಟಿ’ ಎಂದು ಕರೆದಿರುವುದು ಅವರ ಮನಸ್ಥಿತಿಯ ಬಿಂಬವಾಗಿದೆ. ಅವರ ಜೀವನದ ಅನುಭವದಲ್ಲಿ ಫ್ರಿನ್ಜ್ ವ್ಯಕ್ತಿತ್ವ ಅವರನ್ನು ಕಾಡಿರಬಹುದು ಎಂದು ಕೆಪಿಸಿಸಿ ಮಾಧ್ಯಮ, ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ಬಾಬು ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, 5 ತಿಂಗಳು ಮೊದಲೇ ರಾಜ್ಯ ಸರಕಾರ ಬರ ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸದೆ ರಾಜ್ಯಕ್ಕೆ ಅನುದಾನ ನೀಡದೆ ವಂಚನೆ ಮಾಡುತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ಕಡೆ ತಮ್ಮ ತಪ್ಪನ್ನು ಒಪ್ಪಿಕೊಂಡು ಇನ್ನೊಂದು ಕಡೆ ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳನ್ನು ತಮ್ಮ ದರ್ಪದ ಮಾತುಗಳಲ್ಲಿ ಟೀಕಿಸಿ ಪದೇ ಪದೇ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ರಾಜ್ಯದ ರಾಜ್ಯಸಭಾ ಸದಸ್ಯರು ಎಂದು ಹೇಳಲು ನಮಗೆ ನಾಚಿಕೆಗೇಡು, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯ ತೆರಿಗೆ ಪಾಲಿನಲ್ಲಿ ತಮ್ಮ ಹಕ್ಕನ್ನು ಹೊಂದಿದ್ದು, ಯಾವುದೇ ರಾಜ್ಯ ಕೇಂದ್ರದ ಭಿಕ್ಷೆಗಾಗಿ ಕಾಯಬೇಕಿಲ್ಲ. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರವೂ ಕೇಂದ್ರ ಸರಕಾರ ಮತ್ತು ಹಣಕಾಸು ಸಚಿವೆಯ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿರುವುದು ವಿಷಾದಕರ ಸಂಗತಿ ಎಂದು ಅವರು ಟೀಕಿಸಿದ್ದಾರೆ.
ಬಹಿರಂಗ ಚರ್ಚೆಗೆ ಬಾರದೆ ಪಲಾಯನ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ. ರಾಜ್ಯದ ಎಂಪಿಗಳು ತಮ್ಮ ಆತ್ಮವಂಚನೆ ಮಾಡಿಕೊಳ್ಳದೆ ಕೇಂದ್ರದ ರಾಜ್ಯ ವಿರೋಧಿ ನೀತಿಯನ್ನು ಪ್ರಶ್ನೆ ಮಾಡಲಿ ಮತ್ತು ನಿರ್ಮಲಾ ಸೀತಾರಾಮನ್ಗೆ ಚೀಮಾರಿ ಹಾಕಲಿ. ಸೀತಾರಾಮನ್ ಅವರು ತಮ್ಮ ಫ್ರಿನ್ಜ್ ಮನಸ್ಥಿತಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಿ ಅಥವಾ ಫ್ರಿನ್ಜ್ ಮನಸ್ಥಿತಿಯಿಂದ ಹೊರಬರಲು ಚಿಂತಕ ಪರಕಾಲ ಪ್ರಭಾಕರ್ ಅವರಿಂದ ಸಲಹೆ ಪಡೆದುಕೊಳ್ಳಲಿ ಎಂದು ರಮೇಶ್ಬಾಬು ತಿಳಿಸಿದ್ದಾರೆ.