ಬಿಜೆಪಿ ನೀಡಿದ ಭರವಸೆಗಳು ‘ಸುಳ್ಳಿನ ಗ್ಯಾರಂಟಿ’ ಅಷ್ಟೇ : ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್
ಬೆಂಗಳೂರು: ಈ ಲೋಕಸಭಾ ಚುನಾವಣೆಗೆಯಲ್ಲಿ ಬಿಜೆಪಿ ಕೊಟ್ಟಿರುವ ಭರವಸೆಗಳು ಸುಳ್ಳಿನ ಗ್ಯಾರಂಟಿ ಅಷ್ಟೇ. ಹತ್ತು ವರ್ಷಗಳ ಅವಧಿಯಲ್ಲಿ ಏನೂ ಮಾಡಲಿಲ್ಲ. ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ಧಿಕ್ಕು ತಪ್ಪಿಸುತ್ತಿದೆ. ಹೀಗಾಗಿ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಮನವಿ ಮಾಡಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೇವಲ 9 ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮೋದಿಯವರೇ ನಿಮಗೆ ಜನರ ಕಷ್ಟಗಳನ್ನು ಬಗೆಹರಿಸುವ ಹಂಬಲ ಇದೆಯೇ? ಬಿಜೆಪಿಯ ನಾಯಕರಿಗೆ ದಿನದ 24 ಗಂಟೆಯೂ ಮೋದಿಯವರ ಜಪ ಮಾಡುವುದೇ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಭ್ರಮೆಯಲ್ಲೇ ಆಡಳಿತ: ಹತ್ತು ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಕೇವಲ ಸುಳ್ಳು, ಭ್ರಮೆಗಳಲ್ಲೆ ರಾಜಕೀಯ ಮಾಡುತ್ತಿದೆ. ಬಿಜೆಪಿ ಭ್ರಮೆಗಳನ್ನು ಸೃಷ್ಟಿ ಮಾಡಿ ಜನರ ಗಮನವನನು ಬೇರೆಡೆ ಸೆಳೆದು ದಾರಿ ತಪ್ಪಸಲಾಗುತ್ತಿದೆ. ಭ್ರಮೆಗಳು ತುಂಬಾ ಅಪಾಯಕಾರಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಕೋರಿದರು.
‘ದೇಶದ ಜನರ ಬದುಕಿನ ಸುಧಾರಣೆಗೆ ಬಿಜೆಪಿ ಏನಾದರೂ ಕೊಡುಗೆ ಒಟ್ಟಿದೆಯೇ? 2014ರಲ್ಲಿ 453 ರೂ.ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ 1,150 ರೂ.ಗೆ ಏರಿಕೆಯಾಗಿದೆ. ಬಡ-ಮಧ್ಯಮ ವರ್ಗದವರ ಸ್ಥಿತಿ ಕೆಳಕ್ಕೆ ಬಿದ್ದಿದೆ. ಇದಕ್ಕೆ ಮೋದಿ ಸರಕಾರ ಒಂದೇ ಒಂದು ಕಾರ್ಯಕ್ರಮವನ್ನು ರೂಪಿಸಿಲ್ಲ. ಮಾಜಿ ಪ್ರಧಾನಿಗಳು ದೇಶದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುತ್ತಿದ್ದರು, ಮಾತನಾಡುತ್ತಿದ್ದರು. ಆದರೆ ಮೋದಿ ಸಾರ್ವಜನಿಕ ಸಭೆಗಳಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಅವರು ಟೀಕಿಸಿದರು.
ಬಿಜೆಪಿಯವರೇ ನಿರುದ್ಯೋಗ, ಬೆಲೆ ಏರಿಕೆ ಈ ದೇಶದ ಸಮಸ್ಯೆಗಳಲ್ಲವೇ? ನಿಮ್ಮ ಆಲೋಚನೆ ಕೇವಲ ಅದಾನಿ, ಅಂಬಾನಿ ಪರವಾಗಿ ಮಾತ್ರ ಇದೆ. 2014ರಲ್ಲಿ ಮುಖೇಶ್ ಅಂಬಾನಿ ಬಳಿ 2,360ಕೋಟಿ ಡಾಲರ್ ಆಸ್ತಿ ಇತ್ತು 11,690 ಕೋಟಿಗೆ ಅವರ ಆಸ್ತಿ ತಲುಪಿದೆ. ಬಿಜೆಪಿಯವರು ಜನರನ್ನು ಶ್ರೀಮಂತರನ್ನಾಗಿ ಮಾಡುವುದರ ಬದಲು ಕೇವಲ ಉದ್ದಿಮೆದಾರರ ಸಾಲಮನ್ನಾ ಮಾಡುತ್ತಿದೆ ಎಂದು ಸುದರ್ಶನ್ ವಿವರಿಸಿದರು.
ಸಂಸದೀಯ ವ್ಯವಸ್ಥೆ ದುರ್ಬಲ: ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದ ಮೂಲಕ ಸಂಸದೀಯ ವ್ಯವಸ್ಥೆಯನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ. ಬಹುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ. ಮಾನವೀಯ ಸಂಬಂಧಗಳಿಗೆ ಬಿಜೆಪಿ ಧಕ್ಕೆ ತರುತ್ತಿದೆ. 5 ವರ್ಷ ಅಧಿಕಾರ ಸಿಕ್ಕರೆ ಸಾಕು ದೇಶವನ್ನು ಅಪಾಯದ ಸ್ಥಿತಿಗೆ ಬಿಜೆಪಿ ದೂಡಲಿದೆ. ರೈತರನ್ನು ಬೀದಿಯಲ್ಲಿ ನಿಲ್ಲಿಸಿದ ಕೀರ್ತಿ ಮೋದಿ ಸರಕಾರದ್ದು. ಕಾರ್ಮಿಕರು ಮುಷ್ಕರದ ಹಕ್ಕನ್ನೆ ಕಸಿಯಲಾಗಿದೆ. ಕಾರ್ಮಿಕರು ಇಲ್ಲದೆ ಪ್ರಗತಿ ಇಲ್ಲ. ಆದರೆ ಅವರನ್ನೇ ಕಟ್ಟಿ ಹಾಕಲಾಗಿದೆ ಎಂದು ಸುದರ್ಶನ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ, ಹಿರಿಯ ಮುಖಂಡ ರಾಮಚಂದ್ರಪ್ಪ ಉಪಸ್ಥಿತರಿದ್ದರು.