ಮೋದಿ, ಶಾಗೆ ಸಂವಿಧಾನ, ಕಾಂಗ್ರೆಸ್ ಪ್ರಣಾಳಿಕೆ ಕೊರಿಯರ್ ಮಾಡಿದ ಕಾಂಗ್ರೆಸ್!
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ವಿಳಾಸಕ್ಕೆ ಸಂವಿಧಾನ ಪುಸ್ತಕ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಕೊರಿಯರ್ ಮೂಲಕ ಕಳುಹಿಸಿ, ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಿ.ವಿ.ಶ್ರೀನಿವಾಸ್ ಮಾತನಾಡಿ, ಪ್ರಧಾನಿ ಮೋದಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಮಾಹಿತಿ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ಓದಬೇಕು. ಐತಿಹಾಸಿಕ ಐದು ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ನೀಡಿದೆ. ಈ ಪ್ರಣಾಳಿಕೆ 140 ಕೋಟಿ ಜನರ ಧ್ವನಿಯಾಗಿದೆ ಎಂದರು.
ಸಂವಿಧಾನ ಬದಲಾವಣೆ ಮಾಡುವ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು. ಕೇಂದ್ರ ಸರಕಾರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಒಂದು ವಾರದಲ್ಲಿ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಮಹಿಳೆಯರಿಗೆ 1 ಲಕ್ಷ ರೂ. ಸಹಾಯ ನಿಧಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ಸಣ್ಣ ವ್ಯಾಪಾರಿಗಳಿಗೆ ಸಹಾಯಧನ, ರೈತರಿಗೆ ಎಮ್.ಎಸ್.ಪಿ ನೀತಿ ಮತ್ತು ಪ್ರತಿ ಜಿಲ್ಲೆಗೆ 5,000 ಕೋಟಿ ರೂ. ಅನುದಾನ ಮೀಸಲಿಡುವ ಗ್ಯಾರಂಟಿಯನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದು ಬಿ.ವಿ.ಶ್ರೀನಿವಾಸ್ ಹೇಳಿದರು.
ಸುಳ್ಳು, ಭ್ರಷ್ಟಚಾರ, ದ್ವೇಷ ರಾಜಕಾರಣಗಳಲ್ಲಿ ನರೇಂದ್ರ ಮೋದಿ ಚಾಂಪಿಯನ್ ಆಗಿದ್ದಾರೆ. ದೇಶದ ಕಪ್ಪು ಹಣ ವಿದೇಶದಲ್ಲಿ ಶೇ.10ರಷ್ಟು ಹೆಚ್ಚಾಗಿದೆ. ಇದಕ್ಕೆ ಉತ್ತರವಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಸುಳ್ಳು ಮಾಹಿತಿ ಹೇಳುತ್ತಿರುವ ಪ್ರಧಾನಿಗೆ ಚುನಾವಣೆ ಆಯೋಗ ನೋಟಿಸ್ ನೀಡಬೇಕು ಎಂದು ಬಿ.ವಿ.ಶ್ರೀನಿವಾಸ್ ಆಗ್ರಹಿಸಿದರು.