ಪೆನ್ ಡ್ರೈವ್ ಪ್ರಕರಣ | ಹೆಣ್ಣು ಮಕ್ಕಳನ್ನು ಹೆದರಿಸಿ, ಲೈಂಗಿಕ ದೌರ್ಜನ್ಯ : ನಾಗಲಕ್ಷ್ಮಿ ಚೌಧರಿ
ಬೆಂಗಳೂರು: ಹಾಸನ ಲೈಂಗಿಕ ಹಗರಣದಲ್ಲಿ ಅಧಿಕಾರ ಹಾಗೂ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸಾವಿರಾರು ಹೆಣ್ಣು ಮಕ್ಕಳನ್ನು ಹೆದರಿಸಿ, ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲೇ ಇಂತಹ ಕೃತ್ಯ ಇದೇ ಮೊದಲ ಬಾರಿಗೆ ನಡೆದಿದ್ದು, ನಮ್ಮ ಮಣ್ಣಿನಲ್ಲಿ ನಡೆದಿರುವುದು ನಮ್ಮ ಪಾಲಿನ ದೊಡ್ಡ ದುರಂತ. ಈಗಾಗಲೇ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದರು.
ಯಾರೇ ಬಂದು ದೂರು ಕೊಟ್ಟರೂ ಅವರ ಗೌಪ್ಯತೆ ಕಾಪಾಡುತ್ತೇವೆ. ಜತೆಗೆ ರಕ್ಷಣೆ ನೀಡುತ್ತೇವೆ. ಹೀಗಾಗಿ ಧೈರ್ಯವಾಗಿ ಬಂದು ದೂರು ದಾಖಲಿಸಬೇಕು ಎಂದ ಅವರು, ಪೆನ್ಡ್ರೈವ್ನಲ್ಲಿರುವ ವಿಡಿಯೊಗಳನ್ನು ನೋಡಲು ಕಷ್ಟವಾಯಿತು. ಅಮಾಯಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರನ್ನು ಅಕ್ಷರಶಃ ಶೋಷಣೆ ಮಾಡಲಾಗಿದೆ.ಇಂತಹ ವಿಡಿಯೊಗಳನ್ನು ವೈರಲ್ ಮಾಡಬಾರದು ಎಂದು ತಿಳಿಸಿದರು.