ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ: ಸಂತ್ರಸ್ತರ ಪೂರ್ಣ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯ
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ವ್ಯಕ್ತಿಗಳ ಮನಸ್ಥಿತಿ ವಿಕೃತವಾಗಿದ್ದು, ಅಂಥವರನ್ನು ಕೂಡಲೆ ಬಂಧಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಬೇಕು ಎಂದು ಮಹಿಳಾ ಸಂಘರ್ಷ ಸಮಿತಿಯು ಕರ್ನಾಟಕ ಮಹಿಳಾ ಆಯೋಗವನ್ನು ಆಗ್ರಹಿಸಿದೆ.
ಗುರುವಾರ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ ದಾಸ್ ಕರ್ನಾಟಕ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಹಾಸನದ ಕೆಲವು ಹೆಣ್ಣು ಮಕ್ಕಳ ವಿಡಿಯೋ, ಫೋಟೋಗಳನ್ನು ರಸ್ತೆ ರಸ್ತೆಗಳಲ್ಲಿ ಬಿಸಾಕಿರುವ ಪೆನ್ ಡ್ರೈವ್ ಮೂಲಕ ಬಹಿರಂಗ ಪಡಿಸಿ ಅವಮಾನ ಮಾಡಲಾಗಿದೆ. ಇದರಿಂದ ಎಷ್ಟೋ ಕುಟುಂಬಗಳ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲದ ನೋವಲ್ಲಿ ಮುಳುಗುವಂತಾಗಿದೆ ಎಂದಿದ್ದಾರೆ.
ಬೇರೆಯವರ ಖಾಸಗಿತನಕ್ಕೆ ಧಕ್ಕೆ ತರುವ, ಅವರ ಚಾರಿತ್ರಾಹರಣ ಮಾಡುವ ಈ ಹೀನಾಯ ಕೃತ್ಯದ ಹಿಂದೆ ವ್ಯವಸ್ಥಿತ ಜಾಲವೇ ಇರುವುದು ಈ ಕೃತ್ಯದ ವೈಖರಿಯಿಂದ ಕಂಡು ಬಂದಿದೆ. ರೇವಣ್ಣ ಅವರ ಕುಟುಂಬದ ಡ್ರೈವರ್ ಕಾರ್ತಿಕ್ ನೀಡಿರುವ ಹೇಳಿಕೆಯಿಂದ ಪೆನ್ ಡ್ರೈವ್ನ ಮೂಲ ಆತನೇ ಎನ್ನುವುದು ಸಾಬೀತಾಗಿದ್ದು, ಅವನ ಹೇಳಿಕೆ ಆಧರಿಸಿ, ಈ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಮಾಡಿದವರು, ಹಂಚಿದವರು ಯಾರು ಎಂಬ ಬಗ್ಗೆ ಮಂದಗತಿಯಲ್ಲಿ ತನಿಖೆ ನಡೆದಿರುವುದು ವಿಷಾದನೀಯ ಎಂದು ಖಂಡಿಸಿದ್ದಾರೆ.
ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಹಾಸನದ ಪೊಲೀಸ್, ಎಸ್ಐಟಿಗೆ ಸ್ಪಷ್ಟ ಸೂಚನೆ ನೀಡಬೇಕು. ಇಲ್ಲಿ ಮುಖ್ಯವಾಗಿ ಸೈಬರ್ ಅಪರಾಧ ಪೊಲೀಸರಿಗೂ ಸ್ಪಷ್ಟ ಆದೇಶವನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಕೆಲವು ಡಿಜಿಟಲ್ ಮಾಧ್ಯಮಗಳಲ್ಲಿ ಕಾನೂನು ಉಲ್ಲಂಘನೆ ಮಾಡಿ, ಹಾಸನದ ಹೆಣ್ಣು ಮಕ್ಕಳ ಮಾನಕ್ಕೆ ಅಪಚಾರ ಆಗುವ ರೀತಿಯಲ್ಲಿ ವಿಡಿಯೋ, ಫೋಟೋ ಬರುತ್ತಿದ್ದು ಇಂತಹ ಸಾಮಾಜಿಕ ಜಾಲ ತಾಣಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು, ಮಹಿಳೆಯರ ಮಾನ ಮರ್ಯಾದೆಯ ಪ್ರಕರಣಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಪ್ರಯತ್ನ ಸಾಗಿದೆ. ಇದು ಸರಿಯಲ್ಲ. ಈ ಕೆಸರು ಎರಚಾಟದ ರಾಜಕೀಯದಲ್ಲಿ ಮಹಿಳೆಯರ ಬದುಕು ನರಕ ಸದೃಷ್ಯವಾಗಿದ್ದು, ಅವರ ಜೊತೆ ಚೆಲ್ಲಾಟ ಆಡುವ ಹೀನ ರಾಜಕಾರಣಿಗಳ ಹೇಳಿಕೆಗಳಿಗೆ ಆಯೋಗ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.