ಅಂಬೇಡ್ಕರ್ ಮೆಡಿಕಲ್ ಕಾಲೇಜು ಹಗರಣವನ್ನು ತನಿಖೆ ನಡೆಸಿ : ಎನ್.ಆರ್.ರಮೇಶ್
ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಬಿ.ಆರ್.ಅಂಬೇಡ್ಕರ್ ಡೆಂಟಲ್ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥ ರಾಧಾಕೃಷ್ಣ ದೊಡ್ಡಮನಿ ಸೇರಿ ಸಂಸ್ಥಾಪಕ ಟ್ರಸ್ಟಿಗಳು ನೂರಾರು ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆಸಿದ್ದು, ಈ ಹಗರಣವನ್ನು ಕೂಡಲೇ ತನಿಖೆ ಮಾಡಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಸೋಮವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಗರಣಕ್ಕೆ ಸಂಬಂಧಿಸಿದಂತೆ 900ಕ್ಕೂ ಹೆಚ್ಚು ಪುಟಗಳಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ.ಆರ್.ಅಂಬೇಡ್ಕರ್ ಡೆಂಟಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಪದವಿ ತರಗತಿಗಳ ಪ್ರವೇಶ ಹೆಸರಿನಲ್ಲಿ ನೂರಾರು ಕೋಟಿ ರೂ.ಹಗರಣ ನೆಡೆದಿದೆ ಎಂದರು.
15 ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆಸಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಅಂಬೇಡ್ಕರ್ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥ ರಾಧಾಕೃಷ್ಣ ದೊಡ್ಡಮನಿ, ಗುರಪ್ಪಾಜಿ, ಮಹದೇವ ಪ್ರಸಾದ್, ಡಾ.ಎನ್.ಟಿ.ಮುರಳಿ ಮೋಹನ್, ವಿ.ಎಸ್.ಕುಬೇರ್ ಹಾಗೂ ಅಮಾನುಲ್ಲಾ ಖಾನ್ ಸೇರಿದಂತೆ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಾರಂಭದಲ್ಲಿ ಆಡಳಿತ ಮಂಡಳಿಯ ಟ್ರಸ್ಟಿ ಆಗಿ ನೇಮಕಗೊಂಡಿದ್ದ ರಾಧಾಕೃಷ್ಣ ದೊಡ್ಡಮನಿ, ಮಲ್ಲಿಕಾರ್ಜುನ ಖರ್ಗೆ ಪ್ರಭಾವವನ್ನು ಬಳಸಿ ಏಕಾಏಕಿ ಆಡಳಿತ ಮಂಡಳಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿದ್ದರು. ಆಡಳಿತಾಧಿಕಾರಿಗಳ ಅವಧಿ ಮುಗಿದ ನಂತರ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮೂವರು ನಿರ್ದೇಶಕರ ಮೇಲೆ ತೀವ್ರವಾದ ಒತ್ತಡ ಹೇರಿ ರಾಧಾಕೃಷ್ಣ ದೊಡ್ಡಮನಿ ತಂಡದ ಸದಸ್ಯರನ್ನು ಆಡಳಿತ ಮಂಡಳಿಯ ಟ್ರಸ್ಟಿಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದರು.
ಮೆಡಿಕಲ್ ಕಾಲೇಜುಗಳು ಮತ್ತು ಡೆಂಟಲ್ ಕಾಲೇಜುಗಳ ಇತಿಹಾಸದಲ್ಲಿಯೇ ಅತೀ ದೊಡ್ಡ ಹಗರಣ ಇದಾಗಿದ್ದು, ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅನರ್ಹ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಂದ ತಲಾ ಕನಿಷ್ಠ 2ಕೋಟಿ ರೂ.ಹಣವನ್ನು ದಾನ ರೂಪದಲ್ಲಿ ಪಡೆದು ಹಗರಣ ನೆಡೆಸಲಾಗಿದೆ ಎಂದು ಅವರು ದೂರಿದರು.
2008-09ರಿಂದ ಇಲ್ಲಿಯವರೆಗೆ ಪ್ರತೀ ವರ್ಷ ಇಂತಹ ನೂರಾರು ಅನುತ್ತೀರ್ಣ ಅನರ್ಹ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪ್ರವೇಶ ನೀಡಲಾಗಿದೆ. ಶ್ರೀಮಂತ ಕುಟುಂಬಗಳ ಅನುತ್ತೀರ್ಣ, ಅನರ್ಹ ವಿದ್ಯಾರ್ಥಿಗಳಿಗೆ ಜಾರ್ಖಂಡ್ ರಾಜ್ಯದ ಅನಾಮಿಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಂತೆ ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಪ್ರವೇಶಗಳನ್ನು ನೀಡಿದ್ದಾರೆ. ಹೀಗಾಗಿ ಈ ಹಗರಣವನ್ನು ಕೂಡಲೇ ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.