ಶಿಕ್ಷಣ ಇಲಾಖೆಯ ಕಚೇರಿ, ಶಾಲೆಗಳಲ್ಲಿ ಅನುಷ್ಠಾನಗೊಂಡ ಯೋಜನೆಗಳ ತಪಾಸಣಾ ವರದಿ ನೀಡಲು ಸೂಚನೆ
ಬೆಂಗಳೂರು : ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಕಛೇರಿ, ಶಾಲೆಗಳಲ್ಲಿ 2023-24ನೆ ಸಾಲಿಗೆ ಸಂಬಂಧಿಸಿದಂತೆ ಅನುಷ್ಠಾನಗೊಂಡ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತಾಗಿ ದಾಖಲೆಗಳ ಸಹಿತ ತಪಾಸಣಾ ವರದಿಯನ್ನು ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. 2024-25ನೆ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗ ಆಡಳಿತದ ಕಾರ್ಯ ವಿಧಾನ ಹಾಗೂ ಕಛೇರಿ ಕಲಸ ಚುರುಕುಗೊಳಿಸಲು ತಪಾಸಣೆ, ಮೇಲುಸ್ತುವಾರಿ ಮತ್ತು ಮಾರ್ಗದರ್ಶನವನ್ನು ಬಲಪಡಿಸುವುದು ತಪಾಸಣೆಯ ಉದ್ದೇಶವಾಗಿದೆ.
ಯೋಜನೆಗಳು ನಿಗಧಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಶಾಲಾ ಹಂತ, ಕ್ಲಸ್ಟರ್ ಹಂತ, ಬ್ಲಾಕ್ ಹಂತ, ಜಿಲ್ಲಾ ಹಂತ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಇಲಾಖೆಯು ವಿವಿಧ ಕಛೇರಿಗಳನ್ನು ಹೊಂದಿರುವುದು ಸರಿಯಷ್ಟೇ. ಶಾಲೆ ಹಾಗೂ ಕಛೇರಿಗಳಲ್ಲಿ ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಆಡಳಿತವನ್ನು ಸಮರ್ಪಕವಾಗಿ ನಡೆಸುತ್ತಿರುವ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡಲು ಕಾಲಕಾಲಕ್ಕೆ ತಪಾಸಣೆಯನ್ನು ಕೈಗೊಳ್ಳಬೇಕಾಗಿರುವುದು ಇಲಾಖೆಯಲ್ಲಿ ಅವಶ್ಯಕವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಕಛೇರಿ, ಶಾಲೆಗಳ 2023-24ನೆ ಸಾಲಿನ 2024ರ ಮಾ.31ರವರೆಗೆ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲು ಅನುಕೂಲವಾಗುವಂತೆ ಇಲಾಖಾಧಿಕಾರಿಗಳಿಗೆ ಕಛೇರಿಗಳನ್ನು ಹಂಚಿಕೆ ಮಾಡಿ ಆದೇಶಿಸಿದೆ. ಸಂಬಂಧಿಸಿದ ಅಧಿಕಾರಿಗಳು ಮಾರ್ಚ್-2025ರ ಒಳಗಾಗಿ ತಪಾಸಣೆ ನಡೆಸಬೇಕು. ತಪಾಸಣಾ ಸಂದರ್ಭದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಪೂರಕ ದಾಖಲೆಗಳ ಸಹಿತ ತಪಾಸಣಾ ವರದಿಯಲ್ಲಿ ನಮೂದಿಸಬೇಕು ಎಂದಿದ್ದಾರೆ.
ತಪಾಸಣಾ ಕಾರ್ಯ ಕೈಗೊಂಡ ಹದಿನೈದು ದಿನಗಳ ಒಳಗಾಗಿ ತಪಾಸಣಾ ವರದಿಯ ಒಂದು ಪ್ರತಿಯನ್ನು ತಪಾಸಣೆ ನಡೆಸಿದ ಕಛೇರಿಯ ಮುಖ್ಯಸ್ಥರಿಗೆ ನೀಡುವುದು. ತಪಾಸಣಾಧಿಕಾರಿಗಳು ಅವರ ಹಂತದಲ್ಲಿ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ತಪಾಸಣಾಧಿಕಾರಿಗಳು ತಪಾಸಣೆ ನಡೆಸುವ ಕಛೇರಿಗಳಿಗೆ ತಪಾಸಣಾ ಕಾರ್ಯ ನಡೆಸುವ ದಿನಾಂಕದ ಕುರಿತು ಪೂರ್ವಭಾವಿಯಾಗಿ ಕಛೇರಿಗಳ ಮುಖ್ಯಸ್ಥರಿಗೆ ಲಿಖಿತವಾಗಿ ತಿಳಿಸಬೇಕು. ತಪಾಸಣಾಧಿಕಾರಿಗಳು ಅಧೀನ ಕಛೇರಿಗಳ ತಪಾಸಣೆ ಕೈಗೊಂಡಾಗ ಈ ಹಿಂದಿನ ತಪಾಸಣಾ ವರದಿಗಳಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಆಕ್ಷೇಪಣಾ ಕಂಡಿಕೆಗಳನ್ನು ಪೂರಕ ದಾಖಲೆಗಳ ಸಹಿತ ಪರಿಶೀಲಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸಿ ಯಥಾವತ್ತಾಗಿ ಆಯುಕ್ತರ ಕಛೇರಿಗೆ ವರದಿ ಮಾಡಲು ತಿಳಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ತಪಾಸಣೆ ಕೈಗೊಳ್ಳುವ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್ಸಿ), ಪ್ರಧಾನ ಮಂತ್ರಿ ಓಷಣ್ ಶಕ್ತಿ ನಿರ್ಮಾಣ್(ಮಧ್ಯಾಹ್ನ ಉಪಹಾರ ಯೋಜನೆ) ತಾಲ್ಲೂಕು ಪಂಚಾಯಿತಿ ಕಛೇರಿ ಹಾಗೂ ಒಂದು ಸರಕಾರಿ ಪ್ರೌಢಶಾಲೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಹೇಳಿದ್ದಾರೆ.
ಉಪನಿರ್ದೇಶಕರ(ಆಡಳಿತ) ಕಛೇರಿಯನ್ನು ತಪಾಸಣೆ ಕೈಗೊಳ್ಳುವ ಸಂದರ್ಭದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮ ಕಛೇರಿ ಮತ್ತು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್(ಮಧ್ಯಾಹ್ನ ಉಪಹಾರ ಯೋಜನೆ) ಜಿಲ್ಲಾ ಪಂಚಾಯಿತಿ ಕಛೇರಿಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಅವರು ಆದೇಶಿಸಿದ್ದಾರೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಛೇರಿಯನ್ನು ತಪಾಸಣೆ ಕೈಗೊಳ್ಳುವ ಸಂದರ್ಭದಲ್ಲಿ ಒಂದು ಸರಕಾರಿ ಪ್ರೌಢಶಾಲೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಪ್ರಸ್ತುತ ಸಾಲಿನ ತಪಾಸಣೆ ಕೈಗೊಳ್ಳುವಾಗ ಕಛೇರಿಯ ಹಿಂದಿನ ಅವಧಿಯ ತಪಾಸಣೆ ಬಾಕಿ ಇದ್ದಲ್ಲಿ ಆ ಅವಧಿಯನ್ನು ತಪಾಸಣೆ ನಡೆಸಿ ಪ್ರಸ್ತುತ ತಪಾಸಣಾ ವರದಿಯೊಂದಿಗೆ ಸಲ್ಲಿಸಬೇಕು ಎಂದು ಆಯುಕ್ತರು ಆದೇಶಿಸಿದ್ದಾರೆ.