ಪತ್ರಕರ್ತರ ಮಾಶಾಸನ ಹಣ ಬಿಡುಗಡೆಗೆ ಕೆಯುಡಬ್ಲ್ಯೂಜೆ ಆಗ್ರಹ
ಬೆಂಗಳೂರು : ನಿವೃತ್ತ ಹಿರಿಯ ಪತ್ರಕರ್ತರುಗಳಿಗೆ ಸರಕಾರದಿಂದ ಸಿಗಬೇಕಿರುವ ಮಾಶಾಸನ ಎರಡು-ಮೂರು ತಿಂಗಳಾದರೂ ಬಿಡುಗಡೆ ಆಗದ ಕಾರಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಾರ್ತಾ ಇಲಾಖೆ ಆಯುಕ್ತರಿಗೆ ಭೇಟಿ ಮಾಡಿ ಆಗ್ರಹಿಸಿದ್ದಾರೆ.
ಮಾಸಾಶನ ಸಕಾಲದಲ್ಲಿ ಬರದೆ ಇರುವುದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು, ಔಷಧಿ ಖರೀದಿಸಲು ಪರದಾಡುವ ಸ್ಥಿತಿ ಎದುರಾಗಿದೆ. ಆದುದರಿಂದ ಕೂಡಲೆ ಸಮಸ್ಯೆ ಸರಿಪಡಿಸಿ ಪ್ರತಿ ತಿಂಗಳು ಸರಿಯಾಗಿ ಮಾಸಾಶನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಮಾಸಾಶನ ಸಮಿತಿಯಲ್ಲಿ ಅರ್ಹರನ್ನು ಆಯ್ಕೆ ಮಾಡಿ ನಾಲ್ಕೈದು ತಿಂಗಳಾದರೂ, ಇನ್ನೂ ಮಾಸಾಶನ ಮಂಜೂರಾಗಿಲ್ಲ. ಸಣ್ಣ ಪುಟ್ಟ ಕಾರಣಕ್ಕಾಗಿ ತಡೆ ಹಿಡಿದಿರುವ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಿ ಮಾಸಾಶನ ಮಂಜೂರು ಮಾಡಬೇಕು ಮತ್ತು ತೊಡಕುಗಳನ್ನು ನಿವಾರಣೆ ಮಾಡಿ ಅರ್ಹರೆಲ್ಲರಿಗೂ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪತ್ರಕರ್ತರಿಗೆ ಉಚಿತ ಬಸ್ಪಾಸ್ ನೀಡಲು ಬಜೆಟ್ನಲ್ಲಿ ಪ್ರಕಟಿಸಿದ್ದು, ಅದನ್ನು ಜಾರಿ ಮಾಡಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ಪತ್ರಕರ್ತರು ಪ್ರಯಾಣಿಸುವ ಸಾರಿಗೆ ಸಂಸ್ಥೆಯ ಉಚಿತ ಬಸ್ಪಾಸ್ನ ಅವಧಿ ಮುಗಿದಿದ್ದರೂ, ಇನ್ನೂ ಬಸ್ಪಾಸ್ ನವೀಕರಣವಾಗದೆ ಸಮಸ್ಯೆಯಾಗುತ್ತಿದೆ. ಕೂಡಲೆ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಿಕೊಡಬೇಕು ಎಂದು ಶಿವಾನಂದ ತಗಡೂರು ಆಗ್ರಹಿಸಿದ್ದಾರೆ.
‘ಎಲ್ಲ ಸಮಸ್ಯೆಗಳಿಗೂ ತಕ್ಷಣವೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಈ ಬಗ್ಗೆ ಸಭೆಯನ್ನು ಕರೆಯಲಾಗುತ್ತದೆ. ಬಸ್ಪಾಸ್ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಪಾಸ್ ನವೀಕರಣ ಮಾಡುವಂತೆ ಈಗಾಗಲೆ ಕೆಎಸ್ಸಾರ್ಟಿಸಿಗೆ ಪತ್ರವನ್ನು ಬರೆಯಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಗಮನಹರಿಸಲಾಗುವುದು’
-ಸೂರಳ್ಕರ್, ವಾರ್ತಾ ಇಲಾಖೆ ಆಯುಕ್ತ