ಮೋದಿ ನೇತೃತ್ವದ ಬಿಜೆಪಿ ಸರಕಾರ ಧರ್ಮದ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದೆ : ರಮೇಶ್ ಬಾಬು
"ಬಿಜೆಪಿಯು ವಿಪಕ್ಷದ ನಾಯಕನ ಮಾತುಗಳನ್ನು ಅಲ್ಲೆಗೆಳೆಯುವ ಉದ್ಧಟತನ ತೋರುತ್ತಿದೆ"
ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಬೆತ್ತಲೆಗೊಳಿಸಿದರೆ, ಅದಕ್ಕೆ ಉತ್ತರಿಸಲಾಗದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಧರ್ಮದ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಟೀಕಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧರ್ಮ ಯಾವತ್ತೂ ದ್ವೇಷ ಮತ್ತು ಭಯವನ್ನು ಹರಡುವುದಿಲ್ಲ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಿದೆ ಮತ್ತು ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ. ದುರ್ಬಲರ, ದಲಿತರ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ತಿಳಿಸಿದರು.
ರಾಹುಲ್ ಗಾಂಧಿಯವರು ಕೇಂದ್ರ ಸರಕಾರದ ವೈಫಲ್ಯಗಳನ್ನು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಾಯದ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರಂಕುಶ ಅಧಿಕಾರದ ಅಡಿಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಮಾನ್ಯ ಮಾಡದೆ, ಇಡೀ ಆಡಳಿತ ವ್ಯವಸ್ಥೆಗೆ ಮೋದಿ ಸರಕಾರ ಹೇಗೆ ಮಸಿ ಬಳಿದಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.
ನರೇಂದ್ರ ಮೋದಿ ಸರಕಾರ ತನ್ನ ತಪ್ಪುಗಳನ್ನು ತಿದ್ದುಕೊಂಡು ಜನರ ಧ್ವನಿಗೆ ಮಾನ್ಯತೆ ಕೊಡುವ ಬದಲು ವಿರೋಧ ಪಕ್ಷದ ನಾಯಕರ ಮಾತುಗಳನ್ನು ಅಲ್ಲೆಗೆಳೆಯುವ ಉದ್ಧಟತನ ತೋರುತ್ತಿದೆ ಎಂದು ರಮೇಶ್ ಬಾಬು ಟೀಕಿಸಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಹುಲ್ ಗಾಂಧಿಯವರ ಭಾಷಣವನ್ನು ಆಧಾರ ರಹಿತ ಸುಳ್ಳು ಆರೋಪ ಎಂದು ಟೀಕಿಸಿದ್ದಾರೆ. ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳಿದಂತೆ ಎನ್ನುವ ಗಾದೆ ಮಾತಿಗೆ ಅನುಗುಣವಾಗಿ ವಿಜಯೇಂದ್ರ ಲೋಕಸಭೆಯ ವಿಪಕ್ಷ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ 5ನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು ಭಾರತ್ ಜೋಡೋ, ನ್ಯಾಯಯತ್ರೆ ಮುಖಾಂತರ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತಿದ್ದಾರೆ. ರಾಜ್ಯದಲ್ಲಿ ಯತ್ನಾಳರಂತ ನಾಯಕರಿಗೆ ಉತ್ತರ ನೀಡಲು ಸಾಧ್ಯವಾಗದೆ ಕದ್ದು ಓಡಾಡುವ ವಿಜಯೇಂದ್ರ, ರಾಹುಲ್ ಗಾಂಧಿಯವರ ಟೀಕೆಗೆ ಮುಂದಾಗಿರುವುದು ಅವರ ಫಲಾಯನವಾದದ ಸಂಕೇತವಾಗಿದೆ ಎಂದು ಅವರು ಹೇಳಿದರು.
ಎ.ಕೆ.ಸುಬ್ಬಯ್ಯ ಅವರಿಂದ ನಳಿನ್ ಕುಮಾರ್ ಕಟೀಲ್ ವರೆಗೆ ಬಿಜೆಪಿಯಲ್ಲಿ ಅನೇಕರು ಅಧ್ಯಕ್ಷರಾಗಿದ್ದು, ವಿಜಯೇಂದ್ರರಂತಹ ವೈಫಲ್ಯದ ನಾಯಕರನ್ನು ಬಿಜೆಪಿ ಯಾವತ್ತೂ ಕಂಡಿರಲಿಲ್ಲ. ಬಿಜೆಪಿ ಗುಂಪುಗಾರಿಕೆಯೇ ಇವರ ನಾಯಕತ್ವದಲ್ಲಿ ಮಿತಿ ಮೀರಿದ್ದು, ಇವರು ಮತ್ತು ಆರ್.ಅಶೋಕ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಇಂತಹ ಪೊಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.
ಲೋಕಸಭೆಯ ಸಮರ್ಥ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧೀಯವರನ್ನು ಟೀಕೆ ಮಾಡಿ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವುದಾದರೆ ಕಾಂಗ್ರೆಸ್ ಪಕ್ಷ ಅವರಿಗೆ ಶುಭ ಹಾರೈಸುತ್ತದೆ ಎಂದು ರಮೇಶ್ ಬಾಬು ತಿಳಿಸಿದರು.