ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್ಪೋರ್ಟೇಷನ್ಗೆ ಚಾಲನೆ
ಕೌಶಲ್ಯಭರಿತ ಮಾನವ ಸಂಪನ್ಮೂಲ ಸಿದ್ಧಗೊಳಿಸುವಲ್ಲಿ ʼಬಿಎಸ್ವಿಟಿʼಯಿಂದ ಮಹತ್ವದ ಹೆಜ್ಜೆ : ಸಂತೋಷ್ ಲಾಡ್
ಬೆಂಗಳೂರು : ಲಿಫ್ಟ್, ಎಲಿವೇಟರ್ ಹಾಗೂ ಎಸ್ಕಲೇಟರ್ಗಳ ನಿರ್ವಹಣೆ, ದುರಸ್ತಿ, ಅಳವಡಿಕೆಗೆ ಸಂಬಂಧಿಸಿದಂತೆ ಕೌಶಲ್ಯಭರಿತ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ʼಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್ಪೋರ್ಟೇಷನ್(ಬಿಎಸ್ವಿಟಿ) ಸಂಸ್ಥೆಯು ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ದೇಶದ ಮೊಟ್ಟ ಮೊದಲ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ಗೆ ಸಂಬಂಧಿಸಿದ ತರಬೇತಿ ಸಂಸ್ಥೆ ‘ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್’(ಬಿಎಸ್ವಿಟಿ)ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯಮಿ ಮುಹಮ್ಮದ್ ಮುಶ್ತಾಕ್ ತಮ್ಮ ಬಿಎಸ್ವಿಟಿ ಸಂಸ್ಥೆಯ ಮೂಲಕ ಇಡೀ ದೇಶದಲ್ಲೆ ಮೊದಲ ಬಾರಿ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ಗೆ ಸಂಬಂಧಿಸಿದಂತೆ ಯುವಕರಿಗೆ ತರಬೇತಿ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ. ಈ ಸಂಸ್ಥೆಯಲ್ಲಿ ಎಸೆಸೆಲ್ಸಿ, ಪಿಯುಸಿ ಓದಿರುವ ಮಕ್ಕಳಿಗೆ ವಿವಿಧ ಅವಧಿಯ ಕೋರ್ಸುಗಳ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ವರ್ಷಕ್ಕೆ 10 ಲಕ್ಷ ಮಕ್ಕಳು ಎಸೆಸೆಲ್ಸಿವರೆಗೆ ತಲುಪಿದರೆ, ಅದರಲ್ಲಿ 5 ಲಕ್ಷ ಮಕ್ಕಳು ಮಾತ್ರ ಪಿಯುಸಿ ಹಾಗೂ ಪದವಿ ಶಿಕ್ಷಣದವರೆಗೆ ಹೋಗುತ್ತಾರೆ. ಉನ್ನತ ಶಿಕ್ಷಣ ಪಡೆಯಲು ಹೋಗುವುದು ಕೇವಲ 3 ಲಕ್ಷ ಮಕ್ಕಳು ಮಾತ್ರ. ಎಸೆಸೆಲ್ಸಿಯಿಂದ ಪದವಿವರೆಗೆ ಇರುವಂತಹ 7 ಲಕ್ಷ ಮಕ್ಕಳನ್ನು ಗುರುತಿಸಿ ಕೌಶಲ್ಯ ತರಬೇತಿ ನೀಡುವುದು ನಮ್ಮ ಆದ್ಯತೆಯಾಗಬೇಕು ಎಂದು ಸಂತೋಷ್ ಲಾಡ್ ತಿಳಿಸಿದರು.
ಯುವಕರಿಗೆ ಕೌಶಲ್ಯ ತರಬೇತಿ ನೀಡಿದರಷ್ಟೇ ಸಾಲದು, ಅವರಿಗೆ ಪ್ರಮಾಣ ಪತ್ರವನ್ನು ನೀಡಬೇಕು. ಅದು ದೇಶ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಡಬೇಕು. ಅಂತರ್ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಬಿಎಸ್ವಿಟಿಯವರು ಒಡಂಬಡಿಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ಇದರಿಂದ, ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಸುಲಭವಾಗಿ ಲಭಿಸುವ ಸಾಧ್ಯತೆಗಳಿವೆ ಎಂದು ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ನಮ್ಮ ಸರಕಾರವು ಆಶಾದೀಪ ಕಾರ್ಯಕ್ರಮ ಜಾರಿಗೆ ತಂದಿದೆ. ಅದರಡಿಯಲ್ಲಿ ಎಸ್ಸಿ-ಎಸ್ಟಿ ಮಕ್ಕಳಿಗೆ ನೀವು ತರಬೇತಿ ನೀಡಿದರೆ, ನಾವು ವಿದ್ಯಾರ್ಥಿವೇತನ ನೀಡುತ್ತೇವೆ. ಅಲ್ಲದೇ, ಎರಡು ವರ್ಷಗಳವರೆಗೆ ಮಾಸಿಕ 7 ಸಾವಿರ ರೂ. ವೇತನವನ್ನು ನೀಡುತ್ತೇವೆ. ಇದು ಸಣ್ಣ ಕೈಗಾರಿಕೆಗಳ ಉಳಿವಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮವಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಸ್ವಾಗತ ಭಾಷಣ ಮಾಡಿದ ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮುಶ್ತಾಕ್, ಭಾರತದಲ್ಲಿ ಎಲಿವೇಟರ್, ಎಕ್ಸಲೇಟರ್ ಸೇರಿದಂತೆ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ನಲ್ಲಿ ಸಾಕಷ್ಟು ಕೌಶಲ್ಯ ಭರಿತ ಮಾನವ ಸಂಪನ್ಮೂಲದ ಬೇಡಿಕೆಯಿದೆ. ಆದರೆ, ಈ ಕ್ಷೇತ್ರದಲ್ಲಿ ಅನುಭವ ಇರುವವರು ಬಹಳ ಕಡಿಮೆ ಎಂದರು.
ನಮ್ಮ ಸಂಸ್ಥೆಯ ಮೂಲಕ ಈ ಅವಕಾಶವನ್ನು ಬಳಸಿಕೊಂಡು ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಭರಿತ ಮಾವನ ಸಂಪನ್ಮೂಲವನ್ನು ಒದಗಿಸಲು ಮುಂದಾಗಿದ್ದೇವೆ. ಇದಕ್ಕಾಗಿ, ನಾವು ಕೈಗಾರಿಕೆಗಳ ದಿಗ್ಗಜರ ಮೂಲಕ ಪಠ್ಯಕ್ರಮ ರಚಿಸಿದ್ದೇವೆ. ಬೋಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಕಲ್ಪಿಸಿಕೊಡಲಿದ್ದೇವೆ. ದಶಕಗಳ ಕಾಲ ಅನುಭವ ಇರುವವರ ಮೂಲಕ ತರಬೇತಿ ನೀಡುತ್ತೇವೆ ಎಂದು ಅವರು ಹೇಳಿದರು.
ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ಡಿಸೈನ್, ನಿರ್ವಹಣೆ, ದುರಸ್ತಿ, ಸ್ಥಾಪನೆಯಲ್ಲಿ ಅನುಭವ ಇರುವವರು ಬಹಳ ಕಡಿಮೆ. 2028ರ ವೇಳೆಗೆ ಜಾಗತಿಕವಾಗಿ ವರ್ಟಿಕಲ್ ಟ್ರಾನ್ಸ್ ಪೋರ್ಟೇಷನ್ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಹೊಸ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆಯಿದೆ. ಆದುದರಿಂದ, ಈ ಕಾರ್ಯಕ್ರಮವು ಸ್ಕಿಲ್ ಇಂಡಿಯಾದ ಆಶಯದಡಿ ಮಹತ್ವ ಪಡೆದುಕೊಂಡಿದೆ ಎಂದು ಮುಹಮ್ಮದ್ ಮುಶ್ತಾಕ್ ತಿಳಿಸಿದರು.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುತ್ತೇವೆ. ವೃತ್ತಿ ಮಾರ್ಗದರ್ಶನವನ್ನು ನೀಡುತ್ತೇವೆ. ಸದ್ಯ ಬೆಂಗಳೂರಿನ ಯಶವಂತಪುರದಲ್ಲಿ ನಮ್ಮ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ಪ್ರಮುಖ ನಗರಗಳಲ್ಲಿಯೂ ತರಬೇತಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಯಲ್ಲಿನ ಕೋರ್ಸುಗಳ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ದೂರವಾಣಿ ಸಂಖ್ಯೆ 080-29902128, ವೆಬ್ಸೈಟ್ www.bharathsvt.com ಅಥವಾ ಇಮೇಲ್ ವಿಳಾಸ info@bharathsvt.com ಗೆ ಸಂಪರ್ಕಿಸಬಹುದಾಗಿದೆ ಎಂದು ಮುಹಮ್ಮದ್ ಮುಶ್ತಾಕ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹಾರಿಸ್, ರಾಜ್ಯ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹ್ರೋಝ್ ಖಾನ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಸ್ಕಿಲ್ ಇಂಡಿಯಾ ಪ್ರತಿನಿಧಿ ಶಾಲಿನಿ ಸಿಂಗ್, ಬಿಎಸ್ವಿಟಿ ಸಿಇಒ ಸಂತೋಷ್ ಕುಮಾರ್, ಇಂಡೋ ಆಫಿಕನ್ ಚೇಂಬರ್ ಆಫ್ ಕಾಮನ್ಸ್ ನ ಮಹಾ ಪ್ರಧಾನ ಕಾರ್ಯದರ್ಶಿ ಸುನಂದಾ ರಾಜೇಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.