ಬೆಲೆ ಏರಿಕೆ ನಿಯಂತ್ರಣದಲ್ಲಿ ಸರಕಾರ ವಿಫಲ : ತಾಹೇರ್ ಹುಸೇನ್

ತಾಹೇರ್ ಹುಸೇನ್
ಬೆಂಗಳೂರು : ಬಸ್, ಮೆಟ್ರೋ, ವಿದ್ಯುತ್ ದರ ಸೇರಿದಂತೆ ಈಗ ನೀರಿನ ದರ ಏರಿಕೆಗೂ ರಾಜ್ಯ ಸರಕಾರವೇ ಪ್ರಸ್ತಾವ ಮಾಡಿದ್ದು, ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಟೀಕಿಸಿದ್ದಾರೆ.
ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಕಡೆಗೆ ಸಾಗುತ್ತಿದ್ದು ಎಲ್ಲದರ ಏರಿಕೆ ಮಾಡುತ್ತಿದೆ. ವಿದ್ಯುತ್, ನೀರು, ಹಾಲಿನ ದರ ಸೇರಿದಂತೆ ಎಲ್ಲ ದರ ಏರಿಸಿದೆ. ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಸರಕಾರ ಹಣಕಾಸಿನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಅಹಿಂದ ನಾಯಕರೆ ಆಗಿದ್ದರೇ ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡಲಿ, ಬಡವರ ಉದ್ದಾರ ಮಾಡಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಕ್ರಮದಿಂದ ಹಿಂದೆ ಸರಿದು ರಾಜ್ಯದ ಜನತೆಗೆ ನೆಮ್ಮದಿಯಾಗಿ ಬದುಕುವ ದಾರಿ ಮಾಡಿಕೊಡಬೇಕು ಎಂದು ತಾಹೇರ್ ಹುಸೇನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





