ಒಳಮೀಸಲಾತಿ ಸಮೀಕ್ಷೆಯಲ್ಲಿ ಮೂಲ ಜಾತಿಯನ್ನು ನಮೂದಿಸಿ : ಸಿದ್ದಯ್ಯ

ಬೆಂಗಳೂರು : ‘ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಸಮೀಕ್ಷೆ ವೇಳೆ ಸಮುದಾಯದವರು ತಮ್ಮ ಮೂಲ ಜಾತಿಯನ್ನು ತಪ್ಪದೆ ನಮೂದಿಸಬೇಕು’ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಮತ್ತು ಆದಿ ಆಂಧ್ರ ಇವು ಜಾತಿಗಳ ಹೆಸರಲ್ಲ. ಅನೇಕ ಜಾತಿಗಳ ಗುಂಪುಗಳಿಗೆ ನೀಡಿದ ಹೆಸರುಗಳಾಗಿವೆ. ಕೆಲವು ಜಿಲ್ಲೆಗಳಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂದು ಬಲಗೈ ಮತ್ತು ಎಡಗೈ ಎರಡೂ ಜಾತಿಗಳು ಗುರುತಿಸಿಕೊಂಡಿವೆ. ಹೀಗಾಗಿ ಸಮೀಕ್ಷೆಯ ಸಮಯದಲ್ಲಿ ಮೂಲ ಜಾತಿ/ಉಪಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ನಮೂದಿಸದೇ, ಬಲಗೈ, ಛಲವಾದಿ, ಹೊಲಯ, ಮಹರ್, ಪರಯ್ಯ, ಮಾಲಾ, ಚನ್ನದಾಸರ ಇತ್ಯಾದಿ ಮೂಲಜಾತಿಯನ್ನು ನಮೂದಿಸಬೇಕು ಎಂದು ಕೋರಿದರು.
ಒಂದು ವೇಳೆ ಮೂಲ ಜಾತಿ, ಉಪಜಾತಿ, ನಮೂದಿಸದಿದ್ದರೆ, ಬಲಗೈ ಗುಂಪಿಗೆ ಸಂಬಂಧಿಸಿದ ಜಾತಿಗಳ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗಿ ನಮಗೆ ವಾಸ್ತವವಾಗಿ ದೊರಕಬೇಕಿರುವ ಮೀಸಲಾತಿ ಸೌಲಭ್ಯದ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಸರಕಾರದಿಂದ ದೊರೆಯುತ್ತಿರುವ ಸೌಲಭ್ಯಗಳಾದ ಶಿಕ್ಷಣ ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿ ಎಲ್ಲದರಿಂದ ವಂಚಿತರಾಗಬೇಕಾಗುತ್ತದೆ ಎಂದು ಸಿದ್ದಯ್ಯ ತಿಳಿಸಿದರು.
ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತದ ಮನೆ ಮನೆ ಜಾತಿ ಸಮೀಕ್ಷೆ ಮೇ 17ರ ವರೆಗೆ ನಡೆಯಲಿದೆ. ಮನೆ ಮನೆ ಸಮೀಕ್ಷೆ ಪ್ರಕ್ರಿಯೆಯಿಂದ ಬಿಟ್ಟು ಹೋದವರು 2ನೇ ಹಂತದಲ್ಲಿ ಸರಕಾರದಿಂದ ಮತಗಟ್ಟೆ ಪ್ರದೇಶಗಳಲ್ಲಿ ಗುರುತಿಸಲಾಗಿರುವ ವಿಶೇಷ ಶಿಬಿರಗಳಿಗೆ ಮೇ 19ರಿಂದ 21ರ ವರೆಗೆ ಭೇಟಿ ನೀಡುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಮೂರನೇ ಹಂತದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಜಾತಿಪ್ರಮಾಣ ಪತ್ರದ ಆರ್ಡಿ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಣಿ ಸಮಿತಿ ಸದಸ್ಯರಾದ ಟಿ.ಆರ್.ಶಿವರಾಂ, ಎಚ್.ಎಸ್.ಲಿಂಗೇಶ್, ಮಹದೇವಯ್ಯ, ಶಿವಣ್ಣ ಬಿ., ಶೀತಲ್ ಕಂಬಾಳೆ, ಛಲವಾದಿ ಮಹಾಸಭಾದ ಖಜಾಂಚಿ ಜಿ. ಮಹದೇವಯ್ಯ, ಸಂಘಟನಾ ಕಾರ್ಯದರ್ಶಿ ಸಿ.ಎಂ.ಮುನಿಸ್ವಾಮಿ, ಮಾಜಿ ಮೇಯರ್ ಸಂಪತ್ ರಾಜ್, ಬಿಬಿಎಂಪಿ ಮಾಜಿ ಸದಸ್ಯ ರಾಜೇಂದ್ರ, ವಕೀಲ ಮಹೇಶ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.







