ಬೆಂಗಳೂರು | ಬಂಧಿತ ಆರೋಪಿಗಳಿಗೆ ಬೆದರಿಸಿ ಹಣ ವಸೂಲಿ ಆರೋಪ: ಮೂವರು ಪೊಲೀಸರು ವಶಕ್ಕೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಬಂಧಿತ ಆರೋಪಿಗಳನ್ನು ಬೆದರಿಸಿ ಸುಮಾರು ಆರು ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆಂಬ ಆರೋಪದಡಿ ಮೂವರು ಪೊಲೀಸರನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್ಕಾನ್ಸ್ಟೇಬಲ್ ಹಾಗೂ ಒಬ್ಬರು ಕಾನ್ಸ್ಟೇಬಲ್ ಸೇರಿ ಮೂವರನ್ನು ವಶಕ್ಕೆ ಪಡೆದಿರುವ ಬಾಗಲೂರು ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿರುವುದಾಗಿ ತಿಳಿದುಬಂದಿದೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆಗೆ ಸಂಬಂಧಪಟ್ಟಂತೆ ಖಚಿತ ಮಾಹಿತಿ ಪಡೆದು ಪ್ರತಿಷ್ಠಿತ ಹೋಟೆಲ್ವೊಂದಕ್ಕೆ ದಾಳಿ ನಡೆಸಿದ ಚಿಕ್ಕಜಾಲ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ಅನಂತರ ಅವರನ್ನು ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ತನಿಖೆ ಆರಂಭಿಸಿರುವ ಬಾಗಲೂರು ಠಾಣಾ ಪೊಲೀಸರು ಪ್ರಕರಣದಲ್ಲಿ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವುದಾಗಿ ಮೂಲಗಳು ತಿಳಿಸಿವೆ.