ವರದಿ, ಚಿತ್ರ, ವೀಡಿಯೊ ಬಳಸುವಾಗ ಮಾಧ್ಯಮ ಸಂಸ್ಥೆಗಳು ಎಚ್ಚರ ವಹಿಸಲಿ : ವಾರ್ತಾ ಇಲಾಖೆ ಸೂಚನೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಬವಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಎಲ್ಲ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಸಂಪಾದಕರು ಮತ್ತು ವಿಷಯ ಸೃಷ್ಠಿಕರ್ತರು ಪರಿಶೀಲನೆ ಇಲ್ಲದ ವರದಿಗಳು, ಚಿತ್ರಗಳು ಅಥವಾ ವಿಡಿಯೋಗಳನ್ನು ಬಳಸಿ ಸುದ್ದಿ ಮಾಡುವ ವೇಳೆ ಅತ್ಯಂತ ಜವಾಬ್ದಾರಿಯುತ ಮತ್ತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ವಾರ್ತಾ ಇಲಾಖೆ ಸೂಚನೆ ನೀಡಿದೆ.
ಶುಕ್ರವಾರ ಈ ಸಂಬಂಧ ಪ್ರಕಟನೆ ಹೊರಡಿಸಿರುವ ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಯಾವುದೇ ಮಾಹಿತಿ ನಂಬಲಾರ್ಹವಲ್ಲದ ಮೂಲಗಳಿಂದ ಮಾಹಿತಿ ಬಂದಿದ್ದರೆ ಅಥವಾ ದೃಢಪಡಿಸದಿದ್ದರೆ ಅದನ್ನು ಪ್ರಕಟಿಸಬೇಡಿ ಎಂದು ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಮತ್ತು ಇತರ ಮಾಧ್ಯಮಗಳ ಮೂಲಕ ನಕಲಿ ಸುದ್ದಿ ಹಾಗೂ ತಪ್ಪು ಮಾಹಿತಿಗಳ ಪ್ರಕರಣದ ಸಾಧ್ಯತೆಯು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ತಪ್ಪು ಮಾಹಿತಿಗಳು ಸಾರ್ವಜನಿಕರಲ್ಲಿ ವಿನಾ ಕಾರಣ ಆತಂಕ ಮಾಡಬಹುದು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಗಂಭೀರ ಹಾನಿ ಮಾಡಬಹುದು ಎಂದು ಹೇಳಿದ್ದಾರೆ.
ಎಲ್ಲ ಮಾಧ್ಯಮ ಸಂಸ್ಥೆಗಳು ಮಾಹಿತಿಗಳ ನೈಜತೆಯನ್ನು ಖಚಿತ ಪಡಿಸಿಕೊಳ್ಳಬೇಕು. ವರದಿಗಳನ್ನು ಉತ್ಕೃಷ್ಟಗೊಳಿಸಿ ಸಾರ್ವಜನಿಕರಿಗೆ ಭಯವನ್ನು ಉಂಟು ಮಾಡಬಾರದು. ಅಜಾಗರೂಕತೆಯಿಂದ ತಪ್ಪು ಮಾಹಿತಿ ಹಂಚಲಾಗಿದ್ದರೆ, ಕೂಡಲೇ ತಪ್ಪು ಸರಿಪಡಿಸಿಕೊಳ್ಳಬೇಕು. ಸಮುದಾಯ ಅಥವಾ ಅಂತರ ರಾಷ್ಟ್ರೀಯ ವಿಷಯಗಳ ವರದಿಯಲ್ಲಿ ಪತ್ರಿಕೋದ್ಯಮದ ಮೌಲ್ಯ, ನೈತಿಕತೆ ಮತ್ತು ನಿಷ್ಪಕ್ಷ ಮಾರ್ಗವನ್ನು ಕಾಯ್ದುಕೊಳ್ಳಬೇಕು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಾರದು ಎಂದು ಅವರು ತಿಳಿಸಿದ್ದಾರೆ.