ಸಾರ್ವಜನಿಕರಿಗೆ ಪೊಲೀಸ್ ಸಂಬಂಧಿತ ವಿಚಾರಗಳ ಬಗ್ಗೆ ಮಾರ್ಗದರ್ಶನ ಅಗತ್ಯ : ವಝೀರ್ ಅಹ್ಮದ್

ಬೆಂಗಳೂರು : ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಹೆಚ್ಚಿನ ಅರಿವು, ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು ಅಗತ್ಯ. ಇದರಿಂದ, ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಹಮ್ಮದ್ ವಝೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಂದಿರಾ ನಗರದ ಮಸ್ಜಿದೇ ಉಮ್ಮುಲ್ ಹಸ್ನೈನ್ನಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಲು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಸೀದಿಯ ಅಧ್ಯಕ್ಷ ಅಬ್ದರ್ರಹ್ಮಾನ್ ಖಾನ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಸಂಬಂಧಿತ ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭವಿಷ್ಯದ ದಿನಗಳಲ್ಲಿಯೂ ಈ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ವಝೀರ್ ಅಹ್ಮದ್ ಹೇಳಿದರು.
ಯಾರಿಗಾದರೂ ಸಲಹೆ, ಸೂಚನೆಗಳು ಬೇಕಾದಲ್ಲಿ ಮಸೀದಿಯ ಕಚೇರಿಯಲ್ಲಿ ಅಂತಹವರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಸಮಸ್ಯೆಯನ್ನು ಬರೆಸಿಕೊಳ್ಳುವಂತೆ ತಿಳಿಸಲಾಗಿದೆ. ಪ್ರತಿ ತಿಂಗಳು ಅಥವಾ 15 ದಿನಗಳಿಗೊಮ್ಮೆ ಈ ರೀತಿಯ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಮಸೀದಿ ಆಡಳಿತ ಸಮಿತಿ ಮೂಲಕ ಒಂದು ಒಳ್ಳೆಯ ಪ್ರಯತ್ನ ಮಾಡಲಾಗಿದೆ. ಇದು ಬಡವರಿಗೆ ತುಂಬಾ ಅನುಕೂಲವಾಗಲಿದೆ. ಬೇರೆ ಮಸೀದಿಗಳಿಗೂ ಇದೊಂದು ಮಾದರಿ ಕಾರ್ಯಕ್ರಮ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಸೀದಿಯ ಅಧ್ಯಕ್ಷ ಅಬ್ದರ್ರಹ್ಮಾನ್ ಖಾನ್ ಮಾತನಾಡಿ, ನಮ್ಮ ಮಸೀದಿಯ ಮಾಜಿ ಅಧ್ಯಕ್ಷ ಝಿಯಾವುಲ್ಲಾ ಖಾನ್ ಅವರು ಸಮಾಜಕ್ಕೆ ಯಾವ ರೀತಿ ಸೇವೆ ಮಾಡಬೇಕು ಎಂದು ನಮಗೆ ಮಾದರಿ ನೀಡಿ ಹೋಗಿದ್ದಾರೆ. ಅವರ ಸೇವೆಯ ಹಾದಿಯನ್ನು ನಾವು ಮುನ್ನಡೆಸುತ್ತಿದ್ದೇವೆ. ನಿವೃತ್ತ ಎಡಿಜಿಪಿ ವಝೀರ್ ಅಹ್ಮದ್ ಅವರನ್ನು ಕರೆಸಿ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಜೊತೆಗೆ, ಲಂಡನ್ನಿಂದ ಎಫ್.ಆರ್.ಸಿ.ಎಸ್ ಪದವಿ ಪಡೆದಿರುವ ಓರ್ವ ಮಹಿಳಾ ವೈದ್ಯೆಯನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದೇವೆ. ಅವರು ಸಂಜೆ ವೇಳೆ ನಮ್ಮ ಮಸೀದಿಯ ಕಚೇರಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಆರೋಗ್ಯ ಸಂಬಂಧಿತ ಸಲಹೆಗಳನ್ನು ನೀಡಲಿದ್ದಾರೆ. ಮಸೀದಿ ಆವರಣವನ್ನು ಕೇವಲ ಪ್ರಾರ್ಥನೆಗೆ ಸೀಮಿತಗೊಳಿಸದೆ, ಜನ ಸಾಮಾನ್ಯರಿಗೆ ಸೇವೆ ಒದಗಿಸುವ ತಾಣವನ್ನಾಗಿ ಮಾಡುವ ಬಯಕೆ ಇದೆ ಎಂದು ಅಬ್ದರ್ರ ಹ್ಮಾನ್ ಖಾನ್ ಹೇಳಿದರು.
ಈ ಸಂದರ್ಭದಲ್ಲಿ ಮಸ್ಜಿದೇ ಉಮ್ಮುಲ್ ಹಸ್ನೈನ್ನ ಖಜಾಂಚಿ ಸುಹೇಲ್ ಲಾಲಾಮಿಯಾ, ಸದಸ್ಯ ಜಲಾಲುದ್ದೀನ್ ಉಪಸ್ಥಿತರಿದ್ದರು.